ಮೈಸೂರು: ‘ತೋಟಗಾರಿಕೆ ಬೆಳೆಗಳನ್ನು ಬೆಳೆದು ಮಾರುಕಟ್ಟೆಯಲ್ಲಿ ಯಾವ ರೀತಿಯಲ್ಲಿ ಲಾಭ ಪಡೆಯಬಹುದು ಎಂಬ ಬಗ್ಗೆ ರೈತರಿಗೆ ಮಾಹಿತಿ ತಲುಪಿಸುವಲ್ಲಿ ಹಣ್ಣು–ಹೊನ್ನು ಬಾನುಲಿ ಕಾರ್ಯಕ್ರಮ ಯಶಸ್ವಿಯಾಗಿದೆ’ ಎಂದು ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ (ತಾಳೆ ಬೆಳೆ–ಕ್ಷೇತ್ರ ಮತ್ತು ನರ್ಸರಿ) ಪಿ.ಎಂ. ಸೊಬರದ ಮೆಚ್ಚುಗೆ ವ್ಯಕ್ತಪಡಿಸಿದರು.
ತೋಟಗಾರಿಕೆ ಇಲಾಖೆ, ತೋಟಗಾರಿಕೆ ಕಾಲೇಜು ಹಾಗೂ ಆಕಾಶವಾಣಿ ಸಹಯೋಗದಲ್ಲಿ ಇಲ್ಲಿನ ಕರ್ಜನ್ ಉದ್ಯಾನದಲ್ಲಿ ಬುಧವಾರ ಆಯೋಜಿಸಿದ್ದ ‘ಹಣ್ಣು–ಹೊನ್ನು’ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಬೇಸಾಯ ಬಾನುಲಿ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕರ್ನಾಟಕದಲ್ಲಿ ಅದರಲ್ಲೂ ವಿಭಿನ್ನ ತೋಟಗಾರಿಕೆ ಬೆಳೆಗಳನ್ನು ಹೊಂದಿರುವ ಮೈಸೂರಿನಲ್ಲಿ ತೋಟಗಾರಿಕೆ ಕೃಷಿ ಇನ್ನಷ್ಟು ಅಭಿವೃದ್ಧಿಯಾಗಲಿ’ ಎಂದು ಆಶಿಸಿದರು.
ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಕೇಶವಮೂರ್ತಿ ಎನ್. ಮಾತನಾಡಿ, ‘ಆಕಾಶವಾಣಿಯಲ್ಲಿ ಪ್ರತಿ ಸೋಮವಾರದಂದು ಬೆಳಿಗ್ಗೆ 6.50ರಿಂದ 7.30ರವರೆಗೆ ಹಣ್ಣು– ಹೊನ್ನು ಕಾರ್ಯಕ್ರಮವನ್ನು ತಾಂತ್ರಿಕ ಅಧಿಕಾರಿಗಳು, ತೋಟಗಾರಿಕಾ ಅಧಿಕಾರಿಗಳು ಹಾಗೂ ಅನುಭವಿ ರೈತರಿಂದ 46 ಸರಣಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಇದಕ್ಕೆ ಸಾವಿರಾರು ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ’ ಎಂದರು.
ತೋಟಗಾರಿಕೆ ಕಾಲೇಜಿನ ಡೀನ್ ಮಂಜುನಾಥ್ ಮಾತನಾಡಿ, ‘ರೇಡಿಯೊ ನಮ್ಮ ಸಂಸ್ಕೃತಿಯ ಭಾಗ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಮೇಲಿನ ವ್ಯಾಮೋಹದಿಂದ ಜನರು ರೇಡಿಯೊ ಆಲಿಸುವುದನ್ನು ಕಡಿಮೆ ಮಾಡಿದ್ದರು. ಆದರೆ, ಕೃಷಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳಲ್ಲಿ ರೇಡಿಯೊ ಮೇಲುಗೈ ಸಾಧಿಸಿದೆ ಎಂಬುದಕ್ಕೆ ಈ ಸರಣಿ ಉದಾಹರಣೆಯಾಗಿದೆ’ ಎಂದು ನುಡಿದರು.
ಉಪ ನಿರ್ದೇಶಕ ರುದ್ರೇಶ್ ಮಾತನಾಡಿ, ‘ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಯೋಜನೆಗಳ ಬಗ್ಗೆ ಶೇ 30ರಷ್ಟು ರೈತರಿಗೆ ಮಾತ್ರ ಮಾಹಿತಿ ಇದೆ. ಉಳಿದವರಿಗೂ ತಲುಪಿಸುವ ಕೆಲಸ ಆಗಬೇಕು’ ಎಂದರು.
ತೋಟಗಾರಿಕೆ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಎಚ್. ಎಂ.ನಾಗರಾಜು, ಉಪ ನಿರ್ದೇಶಕ (ಜಿ.ಪಂ) ಮಂಜುನಾಥ ಅಂಗಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.