ಹಂಪಾಪುರ : ಎಚ್.ಡಿ. ಕೋಟೆ ತಾಲ್ಲೂಕಿನ ಬೆಳಗನಹಳ್ಳಿ ಗ್ರಾಮದಲ್ಲಿ ಗುರುವಾರ ಕಾಳಮ್ಮನವರ ರಥೋತ್ಸವ ಮತ್ತು ತಂಪೋತ್ಸವವವನ್ನು ಗ್ರಾಮಸ್ಥರು ವಿಜೃಂಭಣೆಯಿಂದ ಆಚರಿಸಿದರು.
ಮಂಗಳವಾದ್ಯದೊಡನೆ ಹೊಸತೊರವಳ್ಳಿ ಗ್ರಾಮದ ಮಾರ್ಗವಾಗಿ ಮಕ್ಕಳು ಮತ್ತು ಮಹಿಳೆಯರು, ಗ್ರಾಮಸ್ಥರು ತೆರಳಿ ಕಳಶಗಳನ್ನು ತಂದು ಬೆಳಗನಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಬಾಲಕಿಯರು ಕಳಸಗಳನ್ನು ಹೊತ್ತು ಸಾಗಿದ್ದು ವಿಶೇಷ. ಮಂಗಳ ವಾದ್ಯದ ಮೇಳಕ್ಕೆ ತಕ್ಕಂತೆ ವೀರಭದ್ರ ಕುಣಿತದವರು ಹೆಜ್ಜೆ ಹಾಕಿದರು. ಮಹಿಳೆಯರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದರು, ಯುವಕರು ಹೋಳಿಯಾಡಿದರು.
ಬೆಳಿಗ್ಗೆ 9-30 ಕ್ಕೆ ಮೆರವಣಿಗೆ ಮುಗಿಯಿತು, ಕಾಳಮ್ಮ ದೇವಿಯ ರಥೋತ್ಸವದ ನಂತರ ತಂಪಿನ ಪೂಜೆ ನಡೆಯಿತು.
ತಂಪಿನ ಪೂಜೆಯೇ ವಿಶೇಷ :
ಮಹಿಳೆಯರು ಅಕ್ಕಿ ತಂಬಿಟ್ಟು, ಎಳ್ಳು ತಂಬಿಟ್ಟು, ಗಣಗಲೆ ಹೂವಿನಿಂದ ಮಾಡಿದ ಹಾರ ತಂದು ವಿಶೇಷವಾಗಿ ಪೂಜೆ ಸಲ್ಲಿಸಿದರು.
ನಂತರ ಕಾಳಮ್ಮನವರ ರಥದ ಬಳಿ ಪೂಜೆ ಸಲ್ಲಿಸಿ, ಆ ಬಳಿಕ ತಂಬಿಟ್ಟನ್ನು ನೆರೆಯೊರೆಯವರಿಗೆ ಹಂಚಿ ಸಂಭ್ರಮಿಸಿದರು.
ರಥೋತ್ಸವದ ಅಂಗವಾಗಿ ಗ್ರಾಮದ ಎಲ್ಲಾ ದೇವಾಲಯಗಳನ್ನು ವಿದ್ಯುತ್ ದೀಪಗಳಿಂದ ಆಲಂಕರಿಸಲಾಗಿತ್ತು. ಅಲ್ಲದೇ ಎಲ್ಲ ಮನೆಗಳ ಮುಂದೆ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ವಿಶೇಷ ಎಡೆ;
ರಥೋತ್ಸವದ ಅಂಗವಾಗಿ ಕಾಳಮ್ಮ ದೇವಿಗೆ ಹಲಸಿನ ಹಣ್ಣು ಹಾಗೂ ಬಾಳೆ ಹಣ್ಣಿನ ಎಡೆಯನ್ನು ನೀಡಲಾಯಿತು, ಗ್ರಾಮಸ್ಥರು ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.
ಬಿದಿರಿನ ರಥ :
ಕಾಳಮ್ಮ ದೇವಿಯನ್ನು ಗ್ರಾಮದಲ್ಲಿ ಬಿದಿರಿನ ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಸ್ವತಃ ಗ್ರಾಮಸ್ಥರೇ ಕೃತಕವಾಗಿ ನೂತನವಾಗಿ ನಿರ್ಮಿಸಿದ್ದರು, ಪ್ರತಿ ಭಾರಿಯೂ ನೂತನವಾಗಿ ನಿರ್ಮಿಸುವುದು ಈ ಗ್ಎಅಮದಲ್ಲಿನ ರಥೋತ್ಸವದ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.