ADVERTISEMENT

ಹುಣಸೂರು: ಸಿಬ್ಬಂದಿ ಕೊರತೆಗೆ ಪಶುವೈದ್ಯ ಕೇಂದ್ರ ಬಂದ್

ತಾ.ಪಂ ಸಾಮಾನ್ಯ ಸಭೆ; ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಚೆನ್ನಬಸಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 5:27 IST
Last Updated 11 ಸೆಪ್ಟೆಂಬರ್ 2024, 5:27 IST
ಹುಣಸೂರು ನಗರದ ತಾ.ಪಂ ಸಭಾಂಗಣದಲ್ಲಿ ಆಡಳಿತಾಧಿಕಾರಿ ಸಿದ್ದಗೌರಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ತಾ.ಪಂ ಕಾರ್ಯನಿರ್ವಹಾಣಾಧಿಕಾರಿ ಹೊಂಗಯ್ಯ ಮತ್ತು ರಾಜೇಶ್ ಭಾಗವಹಿಸಿದ್ದರು
ಹುಣಸೂರು ನಗರದ ತಾ.ಪಂ ಸಭಾಂಗಣದಲ್ಲಿ ಆಡಳಿತಾಧಿಕಾರಿ ಸಿದ್ದಗೌರಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ತಾ.ಪಂ ಕಾರ್ಯನಿರ್ವಹಾಣಾಧಿಕಾರಿ ಹೊಂಗಯ್ಯ ಮತ್ತು ರಾಜೇಶ್ ಭಾಗವಹಿಸಿದ್ದರು   

ಹುಣಸೂರು: ‘ಹುಣಸೂರು ಕ್ಷೇತ್ರದ ಗಡಿಭಾಗದ ಸಿಂಗರಮಾರನಹಳ್ಳಿ ಮತ್ತು ಧರ್ಮಾಪುರ ಹೋಬಳಿ ಕೇಂದ್ರದ ಪ್ರಾಥಮಿಕ ಪಶುವೈದ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆ ಬಂದ್ ಮಾಡಲಾಗಿದೆ’ ಎಂದು ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಚೆನ್ನಬಸಪ್ಪ ಸಭೆಗೆ ತಿಳಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಸಿದ್ದಗೌರಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.

ಕ್ಷೇತ್ರದಲ್ಲಿ 3 ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಇದಲ್ಲದೆ 96 ಹುದ್ದೆಗಳಲ್ಲಿ 50 ವಿವಿಧ ಹುದ್ದೆಗಳು ಖಾಲಿ ಇದ್ದು, ಇಲಾಖೆ ಸಮರ್ಪಕವಾಗಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆ ಕುರಿತು ಶಾಸಕರ ಗಮನಕ್ಕೆ ತರಲಾಗಿದ ಎಂದರು.

ADVERTISEMENT

ಕುರಿ ಮತ್ತು ಮೇಕೆಗಳಿಗೆ ಪಿಪಿಆರ್ ರೋಗ ನಿರೋಧಕ ಲಸಿಕೆ ನೀಡಬೇಕಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯನ ಹುಂಡಿಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ಸೂಚಿಸಿದ್ದು, ಈವರೆಗೂ ಕಾರ್ಯಕ್ರಮಕ್ಕೆ ಚಾಲನೆ ಸಿಗದೆ ಲಸಿಕೆ ಅಭಿಯಾನ ಸ್ಥಗಿತವಾಗಿದೆ. ತಾಲ್ಲೂಕಿನಲ್ಲಿ 41,769 ಕುರಿ ಮತ್ತು ಮೇಕೆಗಳಿಗೆ ಅಕ್ಟೋಬರ್‌ ಒಳಗೆ ಲಸಿಕೆ ನೀಡಬೇಕಾಗಿದೆ ಎಂದರು.

ನಗರದ ಹೊರ ವಲಯದ ಚಿಕ್ಕಹುಣಸೂರು ಕೆರೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ₹1 ಕೋಟಿ ಅನುದಾನದಲ್ಲಿ ಅಭಿವೃದ್ಧಿಗೆ ತೆಗೆದುಕೊಂಡು 7 ವರ್ಷ ಕಳೆದಿದ್ದರೂ ಕಾಮಗಾರಿ ಪೂರ್ಣಗೊಳ್ಳದೆ ₹ 95 ಲಕ್ಷ ವ್ಯರ್ಥವಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ ಪೂರ್ಣಗೊಳಿಸಿ ಎಂದು ಸಿದ್ದಗೌರಮ್ಮ ಕೆ.ಆರ್.ಡಿ.ಎ.ಎಲ್ ಅಧಿಕಾರಿ ನಾಗಶಯನ ಅವರಿಗೆ ಎಚ್ಚರಿಸಿದರು.

ಕಲ್ಲೂರಪ್ಪನ ಬೆಟ್ಟ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ₹ 25 ಲಕ್ಷ ಅನುದಾನದಲ್ಲಿ ಈವರಗೆ ₹ 7.84 ಬಿಡುಗಡೆಯಾಗಿದ್ದು, ಉಳಿದ ಹಣ ₹ 17.16 ಲಕ್ಷ ನಿರೀಕ್ಷೆಯಲ್ಲಿದ್ದೇವೆ. ಅನುದಾನ ಬಂದಲ್ಲಿ ಆಸನ ವ್ಯವಸ್ಥೆ ಸೇರಿದಂತೆ ಪ್ರಸ್ತಾವನೆಯಲ್ಲಿರುವ ಎಲ್ಲಾ ಕಾಮಗಾರಿ ಮುಗಿಯಲಿದೆ ಎಂದರು.

ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಭವನ ನಿರ್ಮಾಣ ಕಾಮಗಾರಿ 14 ವರ್ಷದಿಂದ ಪೂರ್ಣಗೊಳ್ಳದೆ ಎಲ್ಲವೂ ನಿರ್ಮಾಣದ ಹಂತದಲ್ಲಿದೆ. ಕಟ್ಟೆಮಳಲವಾಡಿ ಧರ್ಮಾಪುರ ಸೇರಿದಂತೆ ಒಟ್ಟು 6 ಗ್ರಾಮದಲ್ಲಿ ಬೃಹತ್ ಭವನ ನಿರ್ಮಿಸಬೇಕು ಎಂಬ ಬೇಡಿಕೆ ಇದ್ದು, ಈ ಸಂಬಂಧ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದೇವೆ ಅನುದಾನ ಬರಬೇಕು ಎಂದು ತಿಳಿಸಿದರು.

ನಗರದ ಬಾಬು ಜಗಜೀವನ ರಾಮ್ ಭವನ ನಿರ್ಮಾಣ ಕಾಮಗಾರಿ ಪೂರ್ಣವಾಗಲು ₹ 16.90 ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಬಿಡುಗಡೆ ನಿರೀಕ್ಷೆಯಲ್ಲಿದ್ದೇವೆ ಎಂದರು.

ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 14 ಅಂಗನವಾಡಿ ಕೇಂದ್ರ ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿ 2 ವರ್ಷ ಕಳೆದಿದ್ದರೂ, ಕಾಮಗಾರಿ ಪೂರ್ಣಗೊಳಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ತಾ.ಪಂ ಆಡಳಿತಾಧಿಕಾರಿ ಮುಂದಿನ ಸಾಮಾನ್ಯ ಸಭೆಯೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಮಾತೃ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿದರು.

ಶಿಕ್ಷಣ: ಕ್ಷೇತ್ರದ 46 ಶಾಲೆಯಲ್ಲಿ 8311 ಕೊಠಡಿ ಮತ್ತು ಬಿಸಿಯೂಟ ಕೊಠಡಿ ದುರಸ್ತಿ ಮತ್ತು ನಿರ್ಮಾಣಕ್ಕೆ ಒಟ್ಟು ₹47 ಕೋಟಿ ಅನುದಾನ ಬೇಕಿದ್ದು, ಅನುದಾನ ಬಿಡುಗಡೆಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಕುಮಾರಸ್ವಾಮಿ ಸಭೆಗೆ ಮಾಹಿತಿ ನೀಡಿದರು.

‘88 ಶಾಲೆಗಳಲ್ಲಿ 122 ಶೌಚಾಲಯ ನಿರ್ಮಾಣಕ್ಕೆ ₹ 3.69 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒನ್ ಸ್ಕೂಲ್ ಅಟ್ ಎ ಟೈಮ್ ಎಂಬ ಯೋಜನೆ ಅಡಿಯಲ್ಲಿ 8 ಶಾಲೆಯಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಉಳಿದ ಶಾಲೆಗಳಲ್ಲಿ ಶೌಚಾಲಯದ ಸಮಸ್ಯೆ ಕಾಡಿದೆ. ನಗರ ವ್ಯಾಪ್ತಿಯ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ನಗರಸಭೆ ಅನುದಾನಕ್ಕೆ ಕೋರಿದ್ದು, ಅನುದಾನ ಇಲ್ಲ ಎಂದು ತಿಳಿಸಿದ್ದಾರೆ’ ಎಂದರು.

ಕ್ಷೇತ್ರದಲ್ಲಿ 3 ಆಸ್ಪತ್ರೆಯಲ್ಲಿ ವೈದ್ಯರಿಲ್ಲ 96 ಹುದ್ದೆಗಳಲ್ಲಿ 50 ವಿವಿಧ ಹುದ್ದೆಗಳು ಖಾಲಿ 14 ವರ್ಷದಿಂದ ಪೂರ್ಣಗೊಳ್ಳದ ಭವನ ನಿರ್ಮಾಣ

ಬಾಕ್ಸ್ ಅರಣ್ಯ ಇಲಾಖೆ ಪ್ರತಿ ವರ್ಷ ಸಸಿ ನೆಡುವ ಲೆಕ್ಕ ನೀಡುತ್ತಿದೆ. ಈ ಸಸಿಗಳಲ್ಲಿ ಎಷ್ಟು ಬದುಕುಳಿದಿದೆ ಎಂಬ ಲೆಕ್ಕ ನಿಮ್ಮ ವರದಿಯಲ್ಲಿ ತಿಳಿಸಬೇಕು. ಇಲ್ಲವಾದಲ್ಲಿ ಪ್ರತಿ ವರ್ಷ ಸಸಿ ನೆಡಲಷ್ಟೇ ಇಲಾಖೆ ಸೀಮಿತವಾದಂತಾಗಲಿದೆ
ಹೊಂಗಯ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.