ADVERTISEMENT

ಮೈಸೂರು | ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಳ: ನಾಗರಾಜು

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:28 IST
Last Updated 23 ಜೂನ್ 2024, 16:28 IST
ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಪಶುಸಖಿಯರಿಗೆ ಜಾನುವಾರು ನಿರ್ವಹಣೆ ತರಬೇತಿ ಸಮಾರೋಪ ನಡೆಯಿತು
ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಪಶುಸಖಿಯರಿಗೆ ಜಾನುವಾರು ನಿರ್ವಹಣೆ ತರಬೇತಿ ಸಮಾರೋಪ ನಡೆಯಿತು   

ನಂಜನಗೂಡು: ‘ಪಶುಪಾಲನೆ ಹಾಗೂ ಕೃಷಿ ಇಲಾಖೆಗಳು ಬರಗಾಲ ಪರಿಸ್ಥಿತಿಯಲ್ಲಿ ಗುಣಮಟ್ಟದ ಮೇವಿನ ಬೀಜಗಳನ್ನು ಸಕಾಲದಲ್ಲಿ ಹಂಚಿದ್ದರ ಪರಿಣಾಮ ಜಿಲ್ಲೆಯಲ್ಲಿ ಮೇವಿನ ಕೊರತೆ ನಿವಾರಣೆಯಾಗಿ 1 ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ಹೆಚ್ಚಿದೆ’ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ನಾಗರಾಜು ತಿಳಿಸಿದರು.

ತಾಲ್ಲೂಕಿನ ಸುತ್ತೂರು ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಪಶುಸಖಿಯರಿಗೆ ಸಮಗ್ರ ಜಾನುವಾರು ನಿರ್ವಹಣೆ ಕುರಿತು ನಡೆದ ಆರು ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಇಲಾಖೆ ಬರಗಾಲದ ಮುನ್ನೆಚ್ಚರಿಕೆಯ ಕ್ರಮವಾಗಿ ಗುಣಮಟ್ಟದ ಮೇವಿನ ಬೀಜಗಳನ್ನು ಸಕಾಲದಲ್ಲಿ ಹಂಚಿದ್ದರ ಪರಿಣಾಮ ಜಿಲ್ಲೆಯಲ್ಲಿ ಉತ್ತಮ ಮೇವು ಬೆಳದಿದೆ. ಇದರಿಂದಾಗಿ ಜಾನುವಾರುಗಳಿಗೆ ಪೌಷ್ಟಿಕ ಮೇವು ದೊರೆತಿದೆ ಮತ್ತು ಹಾಲಿನ ಉತ್ಪಾದನೆಯು ಹೆಚ್ಚಾಗಿದೆ. ಮೇವಿನ ಬೀಜಗಳ ವಿತರಣೆ ಮತ್ತು ಲಸಿಕೆ ಕಾರ್ಯಕ್ರಮದಲ್ಲಿ ಪಶುಸಖಿಯರು ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದ ಹೆಚ್ಚಿನ ಹಾಲಿನ ಉತ್ಪಾದನೆಯಾಗುತ್ತಿದೆ. ಜೆಎಸ್ಎಸ್ ಕೆವಿಕೆಯಲ್ಲಿ ಪಶುಸಖಿಯರಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಪ್ರತಿ ರೈತರಿಗೂ ಇಲಾಖೆಯ ಯೋಜನಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

ADVERTISEMENT

ಹಿರಿಯ ವಿಜ್ಞಾನಿ ಜ್ಞಾನೇಶ್ ಮಾತನಾಡಿ, ‘ಪಶುಸಖಿಯಂತಹ ಯೋಜನೆಗಳಿಂದ ಮಹಿಳೆಯರ ಸಬಲೀಕರಣವಾಗುತ್ತಿದೆ. ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ರೈತರಿಗೆ ಮಾಹಿತಿಯ ಅವಶ್ಯಕತೆಯಿದೆ. ಅಂತಹ ಮಾಹಿತಿಯನ್ನು ಪಶುಸಖಿಯರು ರೈತರಿಗೆ ನೀಡಬಹುದು. ಉತ್ತಮ ಕೆಲಸಗಳಿಂದ ಪಶುಸಖಿಯರು ಜಿಲ್ಲೆಯಾದ್ಯಂತ ಕೀರ್ತಿಗಳಿಸಬಹದು ಮತ್ತು ರೈತರಿಗೆ ಸಹಕಾರಿಯಾಗುತ್ತಿದೆ’ ಎಂದು ಹೇಳಿದರು.

ವಿಷಯ ತಜ್ಞೆ ಎಚ್.ವಿ.ದಿವ್ಯಾ ಅವರು ಮಾತನಾಡಿ, ‘ಪಶುಸಖಿ ಕಾರ್ಯಕ್ರಮದಿಂದ ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಾರೆ. ಮುಂದಿನ ದಿನಗಳಲ್ಲಿ ಇಲಾಖೆಯ ಜೊತೆ ಸಕ್ರಿಯವಾಗಿ ಕೆಲಸ ನಿರ್ವಹಿಸಿ ರೈತರಿಗೆ ನೆರವಾಗುತ್ತಾರೆ’ ಎಂದರು.

ಕಾರ್ಯಕ್ರಮದಲ್ಲಿ ದಿವ್ಯಾ, ಮಲ್ಲಿಕಾರ್ಜುನಸ್ವಾಮಿ, ಶರಣಬಸವ, ರಕ್ಷಿತ್ ರಾಜ್ ಹಾಗೂ 60ಕ್ಕೂ ಹೆಚ್ಚು ಪಶುಸಖಿಯರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ‘ಹೈನುಗಾರಿಕೆ’ ಉತ್ತಮ ಪಶುಸಖಿಯರಿಂದ ರೈತರಿಗೆ ಮಾಹಿತಿ 6 ದಿನಗಳ ಕಾರ್ಯಾಗಾರ ಪೂರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.