ಪಿರಿಯಾಪಟ್ಟಣ: ಕಾಶಿ ಯಾತ್ರೆ ಮಾಡಿ ಬಂದವರಿಗೆ ಸಹಾಯಧನ ನೀಡುವುದಾಗಿ ಆಶ್ವಾಸನೆ ನೀಡಿದ್ದ ಸರ್ಕಾರ ವರ್ಷ ಕಳೆದರೂ ಸಹಾಯಧನ ನೀಡಿಲ್ಲ ಎಂದು ಸಮಾಜಸೇವಕ ತಾಲೂಕಿನ ಕುಂದನಹಳ್ಳಿ ಗ್ರಾಮದ ಶಿವಣ್ಣ ದೂರಿದ್ದಾರೆ.
ಬಿಜೆಪಿ ಸರ್ಕಾರವು ಕಾಶಿಯಾತ್ರೆ ಮಾಡಿ ಬಂದವರಿಗೆ ಸರ್ಕಾರದಿಂದ ₹ 5 ಸಾವಿರ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿತ್ತು. ಅವರು ತಿಳಿಸಿದಂತೆ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ, 2022ರ ಡಿ.15 ರಂದು ಕಾಶಿಗೆ ಹೋಗಿ ಬಂದಿದ್ದೆವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗರೆಡ್ಡಿ ಕಾಶಿಯಾತ್ರೆ ಸಹಾಯ ಧನವನ್ನು ₹ 5 ಸಾವಿರದಿಂದ ₹ 7,500ಕ್ಕೆ ಹೆಚ್ಚಿಸಿರುವುದಾಗಿ ಹೇಳಿಕೆ ನೀಡಿದ್ದರೂ ನಮಗೆ ಈವರೆಗೆ ಸಹಾಯಧನ ಬಂದಿಲ್ಲ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಜರಾಯಿ ಸಚಿವ ರಾಮಲಿಂಗರೆಡ್ಡಿ, ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಮತ್ತು ರಜನೀಶ್ ಗೋಯಲ್ ಅವರಿಗೆ ಪತ್ರ ಬರೆಯಲಾಗಿದ್ದು ಮುಖ್ಯಮಂತ್ರಿಯವರ ಕಚೇರಿಯಿಂದ ನನ್ನ ಪತ್ರದ ಬಗ್ಗೆ ಸೂಕ್ತ ಕ್ರಮವಹಿಸಿ ಎಂದು ಮುಜರಾಯಿ ಆಯುಕ್ತರ ಕಚೇರಿಗೆ ಆದೇಶ ಬಂದಿದೆ ಆದರೆ ಮುಜರಾಯಿ ಆಯುಕ್ತರು ಇದುವರೆಗೂ ಸಹಾಯಧನ ಕೊಟ್ಟಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.