ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಭಾನುವಾರ ಬೆಳಿಗ್ಗೆ ಇಲ್ಲಿನ ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿ ವಾಯುವಿಹಾರಿಗಳಿಂದ ಮತ ಯಾಚನೆ ಮಾಡಿದರು.
ಯುವಕ, ಯುವತಿಯರು, ಮಹಿಳೆಯರು ಹಾಗೂ ವೃದ್ಧರ ಬಳಿ ತೆರಳಿ ಮತ ಕೇಳಿದರು. ಕೆಲವರು, ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು.
ಬಳಿಕ ಸಮೀಪದ ರಸ್ತೆ ಬದಿಯ ಫಾಸ್ಟ್ಫುಡ್ನಲ್ಲಿ ಅಭಿಮಾನಿಗಳೊಂದಿಗೆ ಉಪಾಹಾರ ಸೇವಿಸಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಎಲ್. ಭಾಸ್ಕರ್ ಗೌಡ, ಮುಖಂಡರಾದ ಆರ್.ಗಿರೀಶ್, ಬಿ.ಕೆ.ಪ್ರಕಾಶ್, ಪುರುಷೋತ್ತಮ್, ಬೀರಿಹುಂಡಿ ಬಸವಣ್ಣ, ಬಿ.ಎಂ. ರಾಮು ಪಾಲ್ಗೊಂಡಿದ್ದರು.
ಕನಕಗಿರಿಯಲ್ಲಿ: ಬಳಿಕ ಅವರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕನಕಗಿರಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ನಿವಾಸಿಗಳಿಂದ ಮತ ಯಾಚಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಪಂಚ ಗ್ಯಾರಂಟಿಗಳಿಂದ ಎಲ್ಲರಿಗೂ ಉಪಯೋಗ ಆಗುತ್ತಿದೆ. ಕೇಂದ್ರದಲ್ಲೂ ನಮ್ಮದೇ ಸರ್ಕಾರ ಬಂದರೆ ಮತ್ತಷ್ಟು ಗ್ಯಾರಂಟಿ ಕಾರ್ಯಕ್ರಮಗಳನ್ನು ನೀಡಲಿದ್ದೇವೆ. ಸಾಮಾನ್ಯ ಕಾರ್ಯಕರ್ತನಾದ ನನಗೊಂದು ಅವಕಾಶ ಮಾಡಿಕೊಡಬೇಕು’ ಎಂದು ಕೋರಿದರು.
ಮಾಜಿ ಶಾಸಕ ಎಂ.ಕೆ ಸೋಮಶೇಖರ್, ಮುಖಂಡರಾದ ಎಚ್.ವಿ ರಾಜೀವ್, ಸೋಮಶೇಖರ್, ಭವ್ಯಾ, ಬಿ.ಎಂ. ರಾಮು, ಗಿರೀಶ್ ಹಾಗೂ ವೆಂಕಟೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.