ADVERTISEMENT

ಸರ್ಕಾರ ಕೃಷಿಕರ ಪರ ಕೆಲಸ ಮಾಡಲಿ: ಕಬ್ಬು ಬೆಳೆಗಾರರ ಸಂಘದ ಒತ್ತಾಯ

ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 16:20 IST
Last Updated 4 ಸೆಪ್ಟೆಂಬರ್ 2024, 16:20 IST
ಕೃಷಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್ ಮಾಡಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಹಿನಕಲ್ ಬಳಿಯ ಸೆಸ್ಕ್‌ ಕಚೇರಿ ಮುಂಭಾಗ ಬುಧವಾರ ಪ್ರತಿಭಟಿಸಿದರು- ಪ್ರಜಾವಾಣಿ ಚಿತ್ರ
ಕೃಷಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್ ಮಾಡಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಹಿನಕಲ್ ಬಳಿಯ ಸೆಸ್ಕ್‌ ಕಚೇರಿ ಮುಂಭಾಗ ಬುಧವಾರ ಪ್ರತಿಭಟಿಸಿದರು- ಪ್ರಜಾವಾಣಿ ಚಿತ್ರ   

ಮೈಸೂರು: ಕೃಷಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್ ಮಾಡಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಹಿನಕಲ್ ಬಳಿಯ ಸೆಸ್ಕ್‌ ಕಚೇರಿ ಮುಂಭಾಗ ಬುಧವಾರ ಪ್ರತಿಭಟಿಸಿದರು.

‘ರೈತರ ಕೃಷಿ ಪಂಪ್‌ಸೆಟ್‌ಗಳ ಆರ್‌ಆರ್ ನಂಬರ್‌ಗೆ ಆಧಾರ್ ಲಿಂಕ್ ಮಾಡಿಸಿ ಖಾಸಗೀಕರಣ ಮಾಡಿ ಶುಲ್ಕ ವಿಧಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಹುನ್ನಾರ ನಡೆಸಿವೆ. ಕೃಷಿಗೆ ಮೂಲವಾದ ವಿದ್ಯುತ್, ಟ್ರಾನ್ಸ್‌ಫಾರ್ಮರ್, ವಿದ್ಯುತ್ ಕಂಬ ಮತ್ತು ತಂತಿಯನ್ನು ಇಲಾಖೆಯ ವೆಚ್ಚದಿಂದ ನಿರ್ಮಿಸಿ ಇದಕ್ಕೆ ರೈತರಿಂದ 17 ರಿಂದ 23 ಸಾವಿರದವರೆಗೆ ಪಡೆಯಲಾಗುತ್ತಿತ್ತು. ಇದನ್ನು ಕೈಬಿಟ್ಟು ರೈತರೇ ನೇರವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಪಡೆಯಲು ಲಕ್ಷಾಂತರ ಖರ್ಚು ಮಾಡುವ ಪರಿಸ್ಥಿತಿ ತಂದಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ರೈತರ ಕೃಷಿ ಉತ್ಪನ್ನಗಳಿಗೆ ಕಾನೂನು ಬದ್ಧ ವೈಜ್ಞಾನಿಕ ಬೆಂಬಲ ಬೆಲೆ ನೀಡಿಲ್ಲ. ಕೃಷಿಗೆ ನೀಡುವ ವಿದ್ಯುತ್ ಸಂಪರ್ಕವನ್ನೂ ದುಬಾರಿಗೊಳಿಸಿ ರೈತರಿಗೆ ಮತ್ತಷ್ಟು ತೊಂದರೆ ನೀಡುತ್ತಿದ್ದಾರೆ. ಸೋಲಾರ್ ಪಂಪ್‌ಸೆಟ್ ಹಾಕಿಸಿಕೊಂಡಿರುವ ರೈತರಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ನಿಯಮ ಕೈಬಿಡಬೇಕು. ನಗರ ಮತ್ತು ಗ್ರಾಮೀಣ ಎಂಬ ವಿದ್ಯುತ್ ತಾರತಮ್ಯ ನೀತಿ ಕೈ ಬಿಡಬೇಕು. ಕೈಗಾರಿಕೆಗಳಿಗೆ ನೀಡುವಂತೆ ಕೃಷಿಗೂ ಬೆಳಿಗ್ಗೆ ವಿದ್ಯುತ್ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಬೇಕು. ಜಿಂದಾಲ್ ಕಂಪನಿಗೆ ನೀಡಿರುವ ಸರ್ಕಾರಿ ಭೂಮಿಯನ್ನು ಹಿಂಪಡೆಯಬೇಕು. ಸೋಲಾರ್ ವಿದ್ಯುತ್ ಅಳವಡಿಕೆಗೂ ಅಕ್ರಮ ಸಕ್ರಮ ಮಾದರಿಯಲ್ಲಿ ಹಣ ಕಟ್ಟಿಸಿಕೊಂಡು ಶೇ 90ರಷ್ಟು ಸಹಾಯಧನ ನೀಡಿ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಟಿಸಿಗಳ ಅಳವಡಿಕೆಗೆ ನಿರ್ಬಂಧ ಹಾಕದೆ ಕೃಷಿಗೆ ಅನುಕೂಲವಾಗುವಂತೆ ರೈತರಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಹನುಮಯ್ಯ, ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗರಾಜ್, ಹಾಡ್ಯ ರವಿ, ಮಲಿಯೂರು ಹರ್ಷ, ಮಹೇಂದ್ರ, ಮುದ್ದಳ್ಳಿ ಚಿಕ್ಕಸ್ವಾಮಿ, ಹೊಸಪುರ ಮಾದಪ್ಪ, ಮೂಡ್ನಾಕೂಡು ಸೋಮೇಶ್, ದೇವೇಂದ್ರ ಕುಮಾರ್, ಶಿವರುದ್ರಪ್ಪ, ಕಸುನಹಳ್ಳಿ ಮಂಜೇಶ್, ಬನ್ನೂರು ಎಂ.ವಿ.ಕೃಷ್ಣಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.