ಮೈಸೂರು: ‘ಹೆಣ್ಣು ಭ್ರೂಣಹತ್ಯೆ ತಡೆಗೆ ಕಾನೂನುಗಳು ಮತ್ತಷ್ಟು ಬಿಗಿಯಾಗಬೇಕು’ ಎಂದು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಜೆ. ಸೋಮಶೇಖರ್ ಅಭಿಪ್ರಾಯಪಟ್ಟರು.
ಮಹಾಜನ ಕಾನೂನು ಕಾಲೇಜಿನಲ್ಲಿ ಶನಿವಾರ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಭ್ರೂಣ ಪತ್ತೆ ಮಾಡುವ ಯಂತ್ರಗಳನ್ನು ಆಲೆಮನೆ, ಜಮೀನುಗಳಲ್ಲೂ ಇಟ್ಟುಕೊಂಡಿರುವುದು ಕಂಡು ಬಂದಿದೆ. ಇವುಗಳನ್ನು ತಡೆಯಲು ಕಾನೂನು ಮತ್ತಷ್ಟು ಕಠಿಣವಾಗಬೇಕು’ ಎಂದರು.
‘ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲರಿಗೂ ಗಂಡು ಮಗುವೇ ಬೇಕು. ಒಂದೇ ಮಗು ಬೇಕು. ಹೆಣ್ಣು ಮಗು ಬೇಡ ಎಂಬ ಭಾವನೆ ಇದೆ. ಇದು ಸರಿಯಲ್ಲ’ ಎಂದು ಹೇಳಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ‘ಪ್ರಕರಣ ಇತ್ಯರ್ಥಕ್ಕಾಗಿ ಮಧ್ಯಸ್ಥಿಕೆ ಕೌಶಲ ಬೆಳೆಸಿಕೊಳ್ಳಬೇಕು. ಪತ್ರಿಕೆಗಳಲ್ಲಿ ಕಾನೂನು ವಿಚಾರಗಳನ್ನು ಓದಿ ಮನನ ಮಾಡಿಕೊಂಡು ಪ್ರತಿಕ್ರಿಯೆ ನೀಡಬೇಕು. ಬಿಡುವಿದ್ದಾಗ ನ್ಯಾಯಾಲಯಗಳಿಗೆ ಭೇಟಿ ನೀಡಿ, ಕಾರ್ಯಕಲಾಪ ವೀಕ್ಷಿಸಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಜನ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಟಿ. ವಿಜಯಲಕ್ಷ್ಮಿ ಮುರಳೀಧರ್ ಮಾತನಾಡಿ, ‘ಮುಂದಿನ ವರ್ಷದಿಂದ ಬಿಬಿಎ, ಎಲ್ಎಲ್ಬಿ ಕೋರ್ಸ್ ಆರಂಭಿಸಲಾಗುವುದು’ ಎಂದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ತೇಜಸ್ವಿನಿ, ಪ್ರಾಂಶುಪಾಲೆ ಕೆ. ಸೌಮ್ಯಾ, ಸಹಾಯಕ ಪ್ರಾಧ್ಯಾಪಕಿಯರಾದ ಎಂ. ಭವ್ಯಾ, ರಶ್ಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.