ಮೈಸೂರು: ‘ಕ್ರೋಧ, ಮತ್ಸರ, ಕಷ್ಟ–ಕೋಟಲೆಗಳು ದೂರಾಗಲಿ, ಉತ್ತಮ ಮಳೆ– ಬೆಳೆಯಾಗಿ ದೇಶ ಸುಭಿಕ್ಷವಾಗಲಿ’ ಎಂದು ಇಲ್ಲಿನ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪ್ರಾರ್ಥಿಸಿದರು.
ನಗರದ ನಂಜನಗೂಡು ರಸ್ತೆಯಲ್ಲಿರುವ ಶ್ರೀದತ್ತ ವೆಂಕಟೇಶ್ವರ ಕ್ಷೇತ್ರದ 25ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
‘ಜನರ ದುಃಖ ಕಡಿಮೆಯಾಗಲಿ, ಸಮಸ್ತ ಜೀವಿಗಳಿಗೂ ಸುಖ ಪ್ರಾಪ್ತಿಯಾಗಲಿ, ರಾಜ್ಯ ಮತ್ತು ದೇಶದ ಅಭಿವೃದ್ದಿಯಾಗಲಿ. ಪ್ರಜೆಗಳು ಮತ್ತು ಪ್ರಜಾ ಪ್ರತಿನಿಧಿಗಳಿಗೆ ಮನಃಶಾಂತಿ ಸಿಗಲಿ. ಅವರು ಜನರ ಕಷ್ಟವನ್ನು ನೋಡಿ ಅವುಗಳನ್ನು ಪರಿಹರಿಸಲಿ’ ಎಂದರು.
‘ಜನರಲ್ಲಿ ಕ್ರೋಧ ಹೆಚ್ಚಾಗುತ್ತಿದೆ. ಶಾಂತಿ ಇಲ್ಲದಂತಾಗಿದೆ. ಕಲಿಯುಗದ ದೇವರು ವೆಂಕಟರಮಣ. ಅವನನ್ನು ಪ್ರಾರ್ಥಿಸಿದರೆ ಸುಖ, ಐಶ್ವರ್ಯ, ಶಾಂತಿ ಸಿಗುತ್ತದೆ. ಕಡು ಬಡವರು ಕೂಡ ಶ್ರೀಮಂತರಾಗುತ್ತಾರೆ. ಆದರೆ, ಆ ದೇವನನ್ನು ನೆಮ್ಮದಿಯಿಂದ ಪ್ರಾರ್ಥಿಸಿ ಅವನ ಸ್ಮರಣೆ ಮಾಡುವುದು ಮುಖ್ಯವಾಗುತ್ತದೆ’ ಎಂದು ತಿಳಿಸಿದರು.
ಕುಂಭಾಭಿಷೇಕವನ್ನು ವಿಜೃಂಭಣೆಯಿಂದಣೆ ನೆರವೇರಿಸಲಾಯಿತು. ಇದಕ್ಕೂ ಮೊದಲು ವಜ್ರೋತ್ಸವ ಯಾಗಮಂಟಪದಲ್ಲಿ ಪ್ರಧಾನ ಯಾಗ ನಡೆಸಲಾಯಿತು. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಪಾಲ್ಗೊಂಡು ಪೂರ್ಣಾಹುತಿ ಸಮರ್ಪಿಸಿದರು.
ನಂತರ ಶ್ರೀಗಳು ದತ್ತ ವೆಂಕಟೇಶ್ವರ ದೇವಾಲಯದ ಮೇಲ್ಭಾಗಕ್ಕೆ ತೆರಳಿ ಆಗಮಪಂಡಿತರ ಸಮ್ಮುಖದಲ್ಲಿ ವಿವಿಧ ನದಿಗಳಿಂದ ತರಲಾಗಿದ್ದ ಜಲದಿಂದ ದೇವಾಲಯಗಳ ಶಿಖರಗಳಿಗೆ ಮಹಾ ಕುಂಭಾಭಿಷೇಕ ನೆರವೇರಿಸಿದರು. ನಂತರ ದೇವತಾ ಮೂರ್ತಿಗಳಿಗೆ ಬ್ರಹ್ಮಕಲಶ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.