ಪ್ರಜಾವಾಣಿ ವಾರ್ತೆ
ನಂಜನಗೂಡು: ತಾಲ್ಲೂಕಿನ ಸುತ್ತೂರು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ಪಶು ಸಖಿಯರಿಗೆ ಆಯೋಜಿಸಿದ್ದ ಸಮಗ್ರ ಜಾನುವಾರು ನಿರ್ವಹಣೆ ಕುರಿತು ಆರು ದಿನದ ಕಾರ್ಯಾಗಾರದ ಸಮಾರೋಪಗೊಂಡಿತು.
ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ನಾಗರಾಜು ಮಾತನಾಡಿ, ‘ಜಾನುವಾರುಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ ಮತ್ತು ಹಲವು ರೋಗಗಳಿಗೆ ತುತ್ತಾಗುತ್ತಿವೆ. ರೈತರ ಆರ್ಥಿಕ ದೃಷ್ಟಿಯಿಂದ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ತೆರಳಿ ಕಾಲು ಬಾಯಿ ಜ್ವರ, ಚರ್ಮಗಂಟು ರೋಗ, ಕರುಳು ಬೇನೆ ಮತ್ತು ಇತರೆ ರೋಗಗಳಿಗೆ ಲಸಿಕೆ ನೀಡುತ್ತಿದ್ದಾರೆ. ಆದ್ದರಿಂದ, ರೈತರು ತಪ್ಪದೇ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು’ ಎಂದರು.
‘ಕುರಿ ಮತ್ತು ಮೇಕೆಗಳಲ್ಲಿ ಜಂತುಹುಳು ಹಾಗೂ ಉಣ್ಣೆಗಳ ಸಮಸ್ಯೆ ಹೆಚ್ಚಿದೆ. ಆದುದರಿಂದ ಅವುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಮತ್ತು ರೈತರು ಜಾನುವಾರುಗಳ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.
ವಿಜ್ಞಾನಿ ಡಾ.ಜ್ಞಾನೇಶ್ ಮಾತನಾಡಿ, ‘ಪಶು ಸಖಿಯರು ರೈತರಿಗೆ ನೆರವಾಗುವುದರಿಂದ ಜಾನುವಾರುಗಳ ಆರೋಗ್ಯ ಉತ್ತಮವಾಗುತ್ತದೆ. ರೈತರ ಆದಾಯ ಕೂಡ ಹೆಚ್ಚುತ್ತದೆ. ಶಿಸ್ತಿನ ಜೊತೆಗೆ ಆಸಕ್ತಿಯಿಂದ ಕೆಲಸ ನಿರ್ವಹಿಸಿದ್ದಲ್ಲಿ ರೈತರ ಬದುಕಿನಲ್ಲಿ ಬಹಳಷ್ಟು ಬದಲಾವಣೆ ತರಬಹುದು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾರ್ಜುನಸ್ವಾಮಿ, ಡಾ.ಶರಣಬಸವ, ಡಾ.ರಕ್ಷಿತ್ರಾಜ್ ಹಾಗೂ 62ಕ್ಕೂ ಹೆಚ್ಚು ಪಶು ಸಖಿಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.