ಮೈಸೂರು: ‘ಅಸ್ತಿತ್ವದ ಪ್ರಶ್ನೆ ಇರುವುದು ಬಿಜೆಪಿಯಲ್ಲೇ ಹೊರತು ಕಾಂಗ್ರೆಸ್ನಲ್ಲಿ ಅಲ್ಲ. ಜೂನ್ 4ರ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಬಣ ರಾಜಕೀಯ ಸ್ಫೋಟಗೊಳ್ಳಲಿದೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದರು.
ನಗರದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಬಿಜೆಪಿಯವರು ಜನ ತಮ್ಮನ್ನು ಎಲ್ಲಿ ಕೂರಿಸಿದ್ದಾರೆಯೋ ಅಲ್ಲಿ ಕೆಲಸ ಮಾಡಬೇಕು. ಸರ್ಕಾರಕ್ಕೆ ಸದ್ಯದಲ್ಲೇ ವರ್ಷ ತುಂಬಲಿದ್ದು, ಸುಭದ್ರವಾಗಿದೆ. ಸರ್ಕಾರ ಪತನ ಎಂದು ಬಿಜೆಪಿಯವರು ಕಾದು ಕುಳಿತಿರುವುದು ಬೇಡ’ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿ, ‘ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಕಾನೂನು ಸುವ್ಯವಸ್ಥೆ ಹದಗೆಟ್ಟಿರಲಿಲ್ಲವೇ’ ಎಂದು ಪ್ರಶ್ನಿಸಿದರು. ‘ಇಂತಹ ಘಟನೆಗಳು ನಡೆದಾಗ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಸರ್ಕಾರ ಮಾಡುತ್ತಲೇ ಇದೆ. ಬಿಜೆಪಿಯು ಹೆಣ್ಣು ಮಕ್ಕಳ ಸುರಕ್ಷತೆಯನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸಿದೆ’ ಎಂದು ದೂರಿದರು.
ಎಸ್ಐಟಿ ತನಿಖೆ ಹಾಗೂ ಪೆನ್ಡ್ರೈವ್ ದಾಖಲೆ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ತಾಕತ್ತಿಗಿಂತ ಕಾನೂನು ದೊಡ್ಡದು. ಅದು ನಮ್ಮ ಬಳಿ ಇದೆ. ಕುಮಾರಸ್ವಾಮಿ ದಾಖಲೆ ಕೊಟ್ಟರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
‘ಯಾವುದೇ ಸರ್ಕಾರ, ಪಕ್ಷವಿರಲಿ. ಕಾನೂನು ಅದೆಲ್ಲಕ್ಕಿಂತ ಮುಂದೆ ಇರಬೇಕು ಮತ್ತು ಗೆಲ್ಲಬೇಕು. ಆಗ ಮಾತ್ರ ಜನರಿಗೆ ನ್ಯಾಯ ಕೊಡಲು ಸಾಧ್ಯ. ಎಸ್ಐಟಿ ಸರಿಯಾದ ಮಾರ್ಗದಲ್ಲಿಯೇ ತನಿಖೆ ನಡೆಸುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.