ADVERTISEMENT

ಎಸ್‌ಸಿ, ಎಸ್‌ಟಿ ಹಣ ದುರ್ಬಳಕೆ: 30ಕ್ಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 14:46 IST
Last Updated 27 ಆಗಸ್ಟ್ 2024, 14:46 IST
   

ಮೈಸೂರು: ‘ಶಾಹು ಮಹಾರಾಜ್ ಅವರು ಮೀಸಲಾತಿ ನೀಡಿದ 122ನೇ ವರ್ಷದ ನೆನಪಿನಲ್ಲಿ ಬಹುಜನ ಸಮಾಜ ಪಕ್ಷದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಘಟಕದಿಂದ ಆ.30ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಗಾಂಧಿ ನಗರದ ಅಂಬೇಡ್ಕರ್‌ ವೃತ್ತದ ಬಳಿ ಎಸ್‌ಸಿ, ಎಸ್‌ಟಿ ಮೀಸಲಾತಿ ಹಕ್ಕು ಸಂರಕ್ಷಣೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಪಕ್ಷದ ಮುಖಂಡ ಚಂದ್ರಶೇಖರ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್‌ಸಿ, ಎಸ್‌ಟಿ ಅಭಿವೃದ್ಧಿಗೆಂದು ತಂದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದರಿಂದ ಮೀಸಲಾತಿಗೆ ಕುತ್ತು ಬಂದಿದೆ. ಈ ಹಣದಲ್ಲಿ ರಾಜ್ಯದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪಿಎಚ್‌.ಡಿವರೆಗಿನ ಉಚಿತ ಶಿಕ್ಷಣ ನೀಡಬಹುದಾಗಿತ್ತು. ಭೂರಹಿತ ಎಸ್‌ಸಿ, ಎಸ್‌ಟಿ ಕೃಷಿ ಕಾರ್ಮಿಕರಿಗೆ ತಲಾ ಐದು ಎಕರೆ ಜಮೀನು ಖರೀದಿಸಿ ಕೊಡಬಹುದಾಗಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ಯಾರಂಟಿಯಲ್ಲಿ ಶೇ 10ರಷ್ಟು ಹಣ ಕೂಡ ಸಮುದಾಯಕ್ಕೆ ತಲುಪುತ್ತಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣವೇ ಇದಕ್ಕೆ ಸಾಕ್ಷಿ. ಇವೆಲ್ಲವನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪುಷ್ಪಾ, ಬಸವಣ್ಣ, ನಂಜುಂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.