ಮೈಸೂರು: ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಭಾನುವಾರ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರಿಂದ ಸಂಭ್ರಮಾಚರಣೆ ನಡೆಯಿತು. ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ‘ಯದುವೀರ್ ಒಡೆಯರ್ ಸೇನೆ’ ಹಾಗೂ ‘ನರೇಂದ್ರ ಮೋದಿ ಅಭಿಮಾನಿ ಬಳಗ’ದ ಸದಸ್ಯರು ವಿಶೇಷ ಪೂಜೆ ಸಲ್ಲಿಸಿ ನಂತರ ನಾಗರಿಕರಿಗೆ ಚಹಾ ವಿತರಿಸಿದರು.
ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಮಾತನಾಡಿ, ‘ದೇಶದ ಪ್ರಬುದ್ಧ ಮತದಾರರು ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿ ಚುನಾಯಿಸಿದ್ದಾರೆ. ರಾಜಕೀಯ ಶಕ್ತಿಗಳು ಜಾತಿ– ಧರ್ಮದ ಹೆಸರಿನಲ್ಲಿ ಅವರ ವಿರುದ್ಧ ಏನೇ ಷಡ್ಯಂತ್ರ ನಡೆಸಿದರೂ ಅವರನ್ನು ಸೋಲಿಸಲು ಆಗಲಿಲ್ಲ’ ಎಂದರು.
‘ದಶಕದಿಂದಲೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವ ಮೋದಿ ಅವರು ವಿಶ್ವದಲ್ಲಿ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಮೇಕ್ ಇನ್ ಇಂಡಿಯಾ ಮೂಲಕ ವಿದೇಶಿ ಬಂಡವಾಳವು ಹರಿದುಬರುವಂತೆ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೇರಲು ಅವರೇ ಕಾರಣ’ ಎಂದು ಹೇಳಿದರು.
ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ‘ದೇಶದ ಮತದಾರ ಎನ್ಡಿಎ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ನೀಡಿದ್ದಾನೆ. ಮುಂದಿನ 5 ವರ್ಷವೂ ಸುಭದ್ರ ಸರ್ಕಾರ ಇರಲಿದೆ. ಅಭಿವೃದ್ಧಿ ಕಾರ್ಯಗಳು ನಡೆಯಲಿವೆ’ ಎಂದರು.
ಯದುವೀರ್ ಒಡೆಯರ್ ಸೇನೆ ಅಧ್ಯಕ್ಷ ಬೈರತಿ ಲಿಂಗರಾಜು, ಮುಖಂಡರಾದ ಯಶಸ್ವಿ ಸೋಮಶೇಖರ್, ಮಾ.ವಿ.ರಾಮಪ್ರಸಾದ್, ಸೌಮ್ಯಾ ಉಮೇಶ್, ಜಗದೀಶ್, ಗಿರೀಶ್, ಪ್ರಕಾಶ್ ಪ್ರಿಯದರ್ಶನ್, ಸುಚೇಂದ್ರ, ರಾಘವೇಂದ್ರ, ಉಮೇಶ್, ಅಶೋಕಪುರಂ ಬಿಲ್ಲಯ್ಯ, ಸದಾಶಿವ, ಚಕ್ರಪಾಣಿ ಹಾಜರಿದ್ದರು.
ಸಿಹಿ ವಿತರಣೆ: ಬೋಗಾದಿಯ ರೂಪಾನಗರದಲ್ಲಿ ‘ಜನಸೇವಕ ಯುವ ಬ್ರಿಗೇಡ್’ ಸದಸ್ಯರು ಪಟಾಕಿ ಸಿಡಿಸಿ, ಸಿಹಿ ವಿತರಿಸಿದರು. ವೇದಿಕೆ ಅಧ್ಯಕ್ಷ ರಾಘವೇಂದ್ರ, ಮಾಲತಿ ಭಟ್, ಪುನೀತ್ ಅರಸ್, ವಿನಯ್ ಅರಸ್, ಪ್ರವೀಣ್, ಭರತ್, ಅವಿನಾಶ್, ಸ್ವಾಮಿ, ರಂಜಿತ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.