ಮೈಸೂರು: ಷೇರು ಮಾರುಕಟ್ಟೆಗೆ ಸಂಬಂಧಿಸಿದ ನಕಲಿ ಕಂಪನಿಯೊಂದರಲ್ಲಿ ಹಣ ಹೂಡಿದ್ದ ನಗರದ ಉದ್ಯಮಿಯೊಬ್ಬರು ₹ 2.96 ಕೋಟಿ ವಂಚನೆಗೊಳಗಾಗಿದ್ದು, ಸೆನ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ನಗರದ ಸರಸ್ವತಿಪುರಂ ನಿವಾಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಆಸಕ್ತಿ ವಹಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲಿ ನೀಡಿದ ಮಾಹಿತಿಯಂತೆ ಏಪ್ರಿಲ್ನಿಂದ ಹಂತ ಹಂತವಾಗಿ ಒಟ್ಟು ₹2.96 ಕೋಟಿ ಹೂಡಿಕೆ ಮಾಡಿದ್ದರು. ಲಾಭ ಗಳಿಕೆಯ ನಿರೀಕ್ಷೆಯಲ್ಲಿದ್ದ ಅವರಿಗೆ ಕಂಪನಿ ಕಡೆಯಿಂದ ಯಾವುದೇ ಹಣ ಬಾರದಿದ್ದಾಗ, ವಂಚನೆ ಆಗಿರುವ ಅರಿವಾಗಿದೆ.
ನಗರದಲ್ಲಿ ದಾಖಲಾದ ಇದೇ ಮಾದರಿ ಐದು ಪ್ರತ್ಯೇಕ ಪ್ರಕರಣದಲ್ಲಿ ಐವರು ₹20 ಲಕ್ಷ ಕಳೆದುಕೊಂಡಿದ್ದಾರೆ.
‘ಈಚೆಗೆ ಷೇರು ಮಾರುಕಟ್ಟೆ ಹಾಗೂ ಕ್ರಿಫ್ಟೊ ಕರೆನ್ಸಿ ಬಗ್ಗೆ ವಂಚನೆ ಪ್ರಕರಣಗಳೇ ಹೆಚ್ಚುತ್ತಿವೆ. ಅವೆಲ್ಲ ವ್ಯವಹಾರಗಳು ಸಾಮಾಜಿಕ ಜಾಲತಾಣಗಳಿಂದಲೇ ಆರಂಭವಾಗಿದೆ. ಎರಡು, ಮೂರು ಲಕ್ಷದಿಂದ ತೊಡಗಿ ಕೋಟಿಯವರೆಗೂ ವಂಚನೆಯಾಗುತ್ತಿದೆ. ಈ ಬಗ್ಗೆ ಜನರಲ್ಲೇ ಅರಿವು ಬರಬೇಕು’ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.