ಮೈಸೂರು: ಇಲ್ಲಿಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋದ ವರ್ಷ ಬಜೆಟ್ನಲ್ಲಿ ಜಿಲ್ಲೆಗೆ ನೀಡಿದ್ದ ಕೊಡುಗೆಗಳಲ್ಲಿ ಕೆಲವಷ್ಟೆ ಪ್ರಗತಿ ಕಂಡಿವೆ. ಉಳಿದವು ಕೇವಲ ಘೋಷಣೆಯಾಗಿಯೇ ಉಳಿದಿವೆ. ಅನುಷ್ಠಾನದ ವಿಷಯದಲ್ಲಿ ಜಿಲ್ಲಾಡಳಿತ ಅಥವಾ ಜಿಲ್ಲಾ ಉಸ್ತುವಾರಿ ಸಚಿವರಿಂದಾಗಲೀ ಕನಿಷ್ಠ ಪರಿಶೀಲನೆ ಸಭೆಯೂ ನಡೆದಿಲ್ಲ!
ಬಜೆಟ್ ಮಂಡನೆಯಾಗಿ ಬರೋಬ್ಬರಿ ಎಂಟು ತಿಂಗಳುಗಳೇ ಉಳಿದಿದ್ದರೂ ಅನುಷ್ಠಾನದಲ್ಲಿ ನಿರೀಕ್ಷಿತ ಪ್ರಗತಿಯೇನೂ ಕಂಡುಬಂದಿಲ್ಲ.
ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿಲ್ಲ. ಜನಸಾಮಾನ್ಯರಿಗೆ ಆರೋಗ್ಯ ಸೇವೆ ಒದಗಿಸುವ ಆಸ್ಪತ್ರೆಗಳಿಗೆ ಅನುದಾನ ದೊರೆತಿಲ್ಲ.
ಸಿಎಂ ಕ್ಷೇತ್ರದ್ದೂ ಆಗಿಲ್ಲ!: ‘ನಮ್ಮ ಸರ್ಕಾರವು ಹಿಂದೆ ಘೋಷಿಸಿದಂತೆಯೇ ಜಿಲ್ಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಚಿತ್ರನಗರಿ ನಿರ್ಮಿಸಲಿದೆ’ ಎಂದು ಮುಖ್ಯಮಂತ್ರಿ ಘೋಷಿಸಿದ್ದರು. ವರುಣ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲೇ ಚಿತ್ರನಗರಿ ಸ್ಥಾಪಿಸಲಾಗುವುದು; ಬೇರೆಲ್ಲಿಗೂ ಸ್ಥಳಾಂತರಿಸುವುದಿಲ್ಲ ಎಂದೂ ಸಿದ್ದರಾಮಯ್ಯ ಒತ್ತಿ ಹೇಳಿದ್ದರು. ಸ್ಥಾಪನೆ ವಿಷಯದಲ್ಲಿ ಗಮನಾರ್ಹ ಬೆಳವಣಿಗೆಗಳೇನೂ ನಡೆದಿಲ್ಲ. ಮುಖ್ಯಮಂತ್ರಿ ಸ್ವಕ್ಷೇತ್ರದಲ್ಲಿನ ಯೋಜನೆಯೇ ನನೆಗುದಿಗೆ ಬಿದ್ದಿದೆ!
ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ 110 ಎಕರೆ ಜಾಗವನ್ನು ಹಿಂದೆಯೇ ಗುರುತಿಸಲಾಗಿದೆ. ‘ಚಿತ್ರನಗರಿಯಾದರೆ ಚಿತ್ರೋದ್ಯಮದ ಬೆಳವಣಿಗೆ, ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ’ ಎನ್ನುವುದು ಚಲನಚಿತ್ರ ರಂಗದವರ ಆಶಾಭಾವ. ಇದನ್ನು 2015–16ರಲ್ಲೇ ಘೋಷಿಸಲಾಗಿತ್ತು. ಈ ಸರ್ಕಾರದಲ್ಲೂ ಅನುಷ್ಠಾನಕ್ಕೆ ಕ್ರಮವಾಗಿಲ್ಲ.
ಆಸ್ಪತ್ರೆಗೂ ಬಂದಿಲ್ಲ ಅನುದಾನ: ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭಕ್ಕೆ ಕ್ರಮ ವಹಿಸಲಾಗಿದೆ. ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ ಅನುದಾನ ಒದಗಿಸಲಾಗುವುದು. ಟ್ರಾಮಾ ಕೇರ್ ಸೆಂಟರ್ ಕಾರ್ಯಾಚರಣೆಗೆ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದರು. ಆಸ್ಪತ್ರೆ ಹಾಗೂ ಘಟಕಗಳು ಕಾರ್ಯಾರಂಭಿಸಿವೆ. ಆದರೆ, ಬಜೆಟ್ನಲ್ಲಿ ಘೋಷಿಸಿದ್ದ ಅನುದಾನ ಬಂದಿಲ್ಲ. ಎಷ್ಟು ಕೊಡಲಾಗುತ್ತದೆ ಎನ್ನುವ ಮಾಹಿತಿಯೂ ಇಲ್ಲ.
ನಗರದ ಗುರುದ್ವಾರದ ಅಭಿವೃದ್ಧಿಗೆ ಅನುದಾನ, ಮೈಸೂರಿನಲ್ಲಿ ಸೈಕ್ಲಿಂಗ್ ವೇಲೋಡ್ರೋಮ್ ಸ್ಥಾಪನೆಗೆ ₹10 ಕೋಟಿ ಅನುದಾನ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಇದೂ ಬಿಡುಗಡೆಯಾಗಿಲ್ಲ.
ನಜರ್ಬಾದ್ನ ಚಾಮುಂಡಿವಿಹಾರ ಕ್ರೀಡಾಂಗಣದ ಬಳಿ ಎಆರ್ (ಆಗ್ಯೂಮೆಂಟೆಡ್ ರಿಯಾಲಿಟಿ) ಮತ್ತು ವಿಆರ್ (ವರ್ಚುವಲ್ ರಿಯಾಲಿಟಿ) ತಂತ್ರಜ್ಞಾನದೊಂದಿಗೆ ಅಂತರರಾಷ್ಟ್ರೀಯ ಗುಣಮಟ್ಟದ ‘ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ’ ನಿರ್ಮಾಣದ ಬಗ್ಗೆ ಘೋಷಿಸಲಾಗಿತ್ತು. ಆದರೆ, ಅನುದಾನದ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ (ಸಮಗ್ರ ಯೋಜನಾ ವರದಿ) ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿದೆ.
ಘೋಷಣೆಗಳು ಕಾಗದದಲ್ಲೇ ಉಳಿದರೆ ಪ್ರಯೋಜನವೇನು ಎನ್ನುವುದು ಜನರ ಪ್ರಶ್ನೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತವರಲ್ಲೇ ನಿರ್ಲಕ್ಷ್ಯ ಪ್ರಗತಿ ಪರಿಶೀಲನಾ ಸಭೆಯೂ ನಡೆದಿಲ್ಲ ಕಾಗದದಲ್ಲೇ ಉಳಿದರೆ ಪ್ರಯೋಜನವೇನು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.