ಮೈಸೂರು: ‘ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಗೆ ಹೊಳೆನರಸೀಪುರದಲ್ಲಿ ಸಿಗುವುದಕ್ಕಿಂತ ಒಂದು ಮತ ಹೆಚ್ಚಾಗಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ. ಇದಕ್ಕಿಂತ ಇನ್ನೇನು ಹೇಳಬೇಕು?’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕೇಳಿದರು.
ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಲ ಬಿಜೆಪಿ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರ ನಡೆಸುತ್ತಿರುವ ಬಗ್ಗೆ ಇಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ನಮ್ಮ ಯಾವ ಬೆಂಬಲಿಗರೂ ಕಾಂಗ್ರೆಸ್ ಜೊತೆ ಹೋಗಿಲ್ಲ. ಈಗ ಯಾರೋ ಹೋಗಿರುವ ಒಬ್ಬ ಬೂತ್ ಅಧ್ಯಕ್ಷ ಕೂಡ ಅಲ್ಲ. ಯಾರೋ ಚಹಾ ಕುಡಿದು ಪ್ರಚಾರ ಪತ್ರ ಕೊಟ್ಟ ಕೂಡಲೇ ಅವರು ಕಾಂಗ್ರೆಸ್ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ನಾವೇ ಕಾಂಗ್ರೆಸ್ನವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಮಾಡುತ್ತಿದ್ದೇನೆ. ಹೀಗಿರುವಾಗ, ಬಿಜೆಪಿಯಿಂದ ಅಲ್ಲಿಗೆ ಹೋಗುವ ಪ್ರಶ್ನೆ ಯಾರಿಗೆ ಬರುತ್ತದೆ’ ಎಂದು ಪ್ರಶ್ನಿಸಿದರು.
‘ನಮ್ಮ ಕಾರ್ಯಕರ್ತರ ಪ್ರತ್ಯೇಕ ಸಭೆಯ ಅಗತ್ಯವೇನೂ ಇಲ್ಲ. ಇದೇ 2ರಂದು ಸಭೆ ನಡೆಸಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಎಲ್ಲರೂ ಎನ್ಡಿಎ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಊಹಾಪೋಹಗಳಿಗೆ ಪದೇ ಪದೇ ಉತ್ತರ ಕೊಡಲಾಗುವುದಿಲ್ಲ. ಎನ್ಡಿಎ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ ಮತ್ತು ಎಲ್ಲರನ್ನೂ ಗೆಲ್ಲಿಸುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.