ADVERTISEMENT

ಮೈಸೂರು:ತಬ್ಬಲಿ ಹುಡುಗಿಗೆ ಕನ್ನಡದಲ್ಲಿ 10 ಚಿನ್ನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 9:12 IST
Last Updated 3 ಮಾರ್ಚ್ 2024, 9:12 IST
<div class="paragraphs"><p>ವಿ.ತೇಜಸ್ವಿನಿ</p></div>

ವಿ.ತೇಜಸ್ವಿನಿ

   

ಮೈಸೂರು: ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡು ವಿದ್ಯಾರ್ಥಿನಿಲಯಗಳಲ್ಲಿ ಓದಿದ ‘ತಬ್ಬಲಿ’ ಹುಡುಗಿ ವಿ.ತೇಜಸ್ವಿನಿ, ಎಂ.ಎ ಕನ್ನಡದಲ್ಲಿ 10 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವದಲ್ಲಿ ಪದಕ ಪಡೆದ ಸಂಭ್ರಮವನ್ನು ದಾರಿ ತೋರಿದ ಶಿಕ್ಷಕರೊಂದಿಗೆ ಹಂಚಿಕೊಂಡರು.

ADVERTISEMENT

ಗಡಿಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ತೇಜಸ್ವಿನಿ, 4ನೇ ತರಗತಿ ಓದುವಾಗ ತಾಯಿ ನಾಗಮ್ಮ, ದ್ವಿತೀಯ ಪಿಯು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ತಂದೆ ಎಚ್‌.ವೆಂಕಟೇಶ್‌ ಅವರನ್ನು ಕಳೆದುಕೊಂಡರು. ಉನ್ನತ ಶಿಕ್ಷಣ ಪಡೆಯುವ ಕನಸು ಕಮರಿದ್ದಾಗ ಅವರಿಗೆ ಶಿಕ್ಷಕರು–ಉಪನ್ಯಾಸಕರು ನೆರವಾದರು.

ಪ್ರಾಥಮಿಕ–ಪ್ರೌಢಶಲಾ ಶಿಕ್ಷಣವನ್ನು ತಲಕಾಡಿನ ಸರ್ಕಾರಿ ಶಾಲೆಗಳಲ್ಲಿ, ಪೂರೈಸಿದ ಅವರು, ಮಳವಳ್ಳಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಓದಿ, ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿಯನ್ನು 9 ಚಿನ್ನದ ಪದಕ ಹಾಗೂ 10 ನಗದು ಬಹುಮಾನದೊಂದಿಗೆ ಉತ್ತೀರ್ಣರಾಗಿದ್ದರು.

‘ಶಿಕ್ಷಕರು– ಸ್ನೇಹಿತರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ. ವಿದ್ಯಾರ್ಥಿನಿಲಯಗಳಲ್ಲಿ ಅನ್ನವಿಕ್ಕಿದ, ದಾರಿ ತೋರಿದ ಎಲ್ಲರನ್ನು ನೆನೆಯುವೆ. ಪಿಎಚ್‌ಡಿ ಮಾಡಬೇಕು. ಉಪನ್ಯಾಸಕಿಯಾಗಿ ಕನ್ನಡ ಭಾಷೆ–ಸಾಹಿತ್ಯವನ್ನು ಮಕ್ಕಳಿಗೆ ಕಲಿಸಬೇಕೆಂಬುದೇ ನನ್ನಾಸೆ’ ಎಂದು ತೇಜಸ್ವಿನಿ ನುಡಿದರು.

ಅಂಧೆಯ ಸಾಧನೆ: ಹುಟ್ಟಿನಿಂದಲೇ ಅಂಧೆಯಾದ ಎಸ್‌.ಅನಘಾ, ಕನ್ನಡ ಎಂ.ಎ ಪದವಿಯಲ್ಲಿ ಚಿನ್ನ ಪದಕ ಪಡೆದಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಸೀನಿಯರ್‌ ಪರೀಕ್ಷೆಯನ್ನು ಪಾಸು ಮಾಡಿರುವ ಅವರು, ವಿದ್ವತ್‌ ಪರೀಕ್ಷೆ ತೆಗೆದುಕೊಂಡಿದ್ದಾರೆ. ಅನಿವಾಸಿ ಭಾರತೀಯರಿಗೆ ಆನ್‌ಲೈನ್‌ನಲ್ಲಿ ಸಂಗೀತ ಪಾಠ ಮಾಡುತ್ತಾ ಈ ಸಾಧನೆ ಮಾಡಿದ್ದಾರೆ.

ಪೋಷಕರಾದ ಪುಷ್ಪಲತಾ– ಕೆ.ಸತೀಶ್‌ ದಂಪತಿ ಮಗಳಿಗೆ ಆತ್ಮವಿಶ್ವಾಸ ತುಂಬಿದ್ದಾರೆ. ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಅನಘಾ ಅವರದ್ದು.

ಎಸ್.ಅನಘಾ

‘ಕಣ್ಣುಗಳಿಲ್ಲದಿರುವುದು ಬದುಕಿನ ತೊಡಕಲ್ಲ. ಇತರ ಇಂದ್ರಿಯಗಳ ಸಾಮರ್ಥ್ಯ ಹೆಚ್ಚೇ ಇದೆ. ಸ್ವಾವಲಂಬಿಯಾಗಿ ಬದುಕಲು ಶಿಕ್ಷಣ ಪಡೆಯಬೇಕು. ಹೀಗಾಗಿಯೇ ಸಂಗೀತ– ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡುವ, ಕಲಿಯುವ ಆಸೆಯಿದೆ. ಪಿಎಚ್‌ಡಿ ಮಾಡಿ ಉಪನ್ಯಾಸಕಿಯಾಗುವೆ’ ಎಂದು ಅನಘಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.