ಮೈಸೂರು: ‘ಹೊರ ಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ನಿಯಮ ಜಾರಿಗೆ ತರುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹ. ಆದರೆ, ಅದರಲ್ಲಿರುವ 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿ ಮತ್ತು 20 ಜನಕ್ಕಿಂತ ಕಡಿಮೆ ನೇಮಕಾತಿಗೆ ಇದು ಅನ್ವಯವಾಗುವುದಿಲ್ಲ ಎಂಬ ಷರತ್ತುಗಳು ಮೂಲ ಉದ್ದೇಶಕ್ಕೆ ಧಕ್ಕೆ ತರುವಂತಿದೆ. ಕೂಡಲೇ ಇದನ್ನು ತೆಗೆದು ಹಾಕಬೇಕು’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸಂಚಾಲಕ ಗುರುಪ್ರಸಾದ್ ಕೆರಗೋಡು ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುತ್ತೋಲೆಯಲ್ಲಿ 1 ಮತ್ತು 6ನೇ ಷರತ್ತುಗಳು ಇಂತಹ ವಿಚಾರ ಪ್ರಸ್ತಾಪಿಸಿವೆ. ಇವು ಮೀಸಲಾತಿಗೆ ಹಿನ್ನಡೆ ತರುತ್ತವೆ. ಅಲ್ಲದೆ, ಮೀಸಲಾತಿ ವಂಚಿಸಲು ಸದಾ ಸಿದ್ಧರಿರುವವರಿಗೆ ಇವು ಸಹಕಾರಿಯಾಗಲಿವೆ. ಕೂಡಲೇ, ಇದನ್ನು ಮಾರ್ಪಾಡುಗೊಳಿಸಬೇಕು. ಉದ್ಯೋಗಗಳ ಸಂಖ್ಯೆ ಎಷ್ಟೇ ಇದ್ದರೂ ರೋಸ್ಟರ್ ನಿಯಮ ಅನ್ವಯದಂತೆ ನೇಮಕಾತಿ ನಡೆಯಬೇಕು. ಈ ಎರಡೂ ಷರತ್ತು ರದ್ದು ಪಡಿಸಬೇಕೆಂದು ಕೋರಿ ಜುಲೈ 5ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದುರು ಸಂಘಟನೆ ಪ್ರತಿಭಟನೆ ನಡೆಸಲಿದೆ’ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ತಾಲ್ಲೂಕು ಸಂಚಾಲಕ ಕಲ್ಲಹಳ್ಳಿ ಕುಮಾರ್, ಬೆಟ್ಟಯ್ಯಕೋಟೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.