ಪಿರಿಯಾಪಟ್ಟಣ: ಪಟ್ಟಣದ ಗೊಲ್ಲರ ಬೀದಿಯಲ್ಲಿ ವಾಸವಾಗಿದ್ದ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ಮೃತರ ಪುತ್ರಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕಾಶ್ (51) ಯಶೋಧಾ (48) ಮೃತ ದಂಪತಿ.
ಗುರುವಾರ ರಾತ್ರಿ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಮನೆಗೆ ತೆರಳಿದ್ದ ದಂಪತಿ ಶುಕ್ರವಾರ ಬೆಳಿಗ್ಗೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಗಳು ತನುಶ್ರೀ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. ರಾತ್ರಿವರೆಗೂ ಹಲವಾರು ಬಾರಿ ಕರೆ ಮಾಡಿ ಕರೆ ಸ್ವೀಕರಿಸದ ಕಾರಣ ತನುಶ್ರೀ ಸಂಬಂಧಿಕರಿಗೆ ಫೋನ್ ಮೂಲಕ ಮನೆಯ ಬಳಿ ತೆರಳಿ ನೋಡುವಂತೆ ಕೋರಿದ್ದಾಳೆ.
ಸಂಬಂಧಿಕರು ಮನೆಯ ಬಳಿ ತೆರಳಿ ಕಿಟಕಿ ತೆರೆದು ನೋಡಿದಾಗ ಅನುಮಾನ ರೀತಿಯಲ್ಲಿ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಬಾಗಿಲು ಮುರಿದು ಮನೆ ಒಳಗೆ ಪ್ರವೇಶಿಸಿ, ಶವಗಳನ್ನು ಪಟ್ಟಣದ ಶವಾಗಾರಕ್ಕೆ ಸಾಗಿಸಿದ್ದಾರೆ.
ಪ್ರಕಾಶ್ ಮೂಲತಃ ಕೆ.ಆರ್. ನಗರ ತಾಲ್ಲೂಕಿನ ಬಂಡಹಳ್ಳಿಯವರಾಗಿದ್ದು, ಪಿರಿಯಾಪಟ್ಟಣದ ಯಶೋಧಾರನ್ನು ವಿವಾಹವಾಗಿ ಮಾವನ ಮನೆಯಲ್ಲೇ ನೆಲಸಿದ್ದರು.
ಮೃತರ ಪುತ್ರಿ ತನುಶ್ರೀ ಪಟ್ಟಣದ ಪೊಲೀಸ್ ಠಾಣೆಗೆ ತನ್ನ ತಂದೆ ತಾಯಿಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.