ಮೈಸೂರು: ‘ಚಾಮರಾಜ ವಿಧಾನಸಭಾ ಕ್ಷೇತ್ರದ ನಾಲ್ಕನೇ ವಾರ್ಡ್ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿ ಕಳಪೆಯಾಗಿದೆ’ ಎಂದು ಆರೋಪಿಸಿ ಫಲಾನುಭವಿಗಳು ಸೋಮವಾರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
‘ಹೊಸ ಮನೆಗಳನ್ನು ಕಟ್ಟಿಕೊಡುವುದಾಗಿ ಹೇಳಿ ಹಳೆಯ ಮನೆಗಳನ್ನು ಕೆಡವಿ ಸುಮಾರು ಒಂದೂವರೆ ವರ್ಷವಾಗಿದೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಷ್ಟೇ ಅಲ್ಲದೆ ಕಳಪೆಯಾಗಿದೆ. ಮನೆ ನಂಬಿ ನಾವು ಬೀದಿ ಪಾಲಾಗಿದ್ದೇವೆ. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು.
‘ಕಾಮಗಾರಿ ಕೆಲ ದಿನಗಳಿಂದ ಸ್ಥಗಿತವಾಗಿದೆ. ಬಿಹಾರ ಮೂಲದ ದಿನಗೂಲಿ ನೌಕರರಿಗೂ ಗುತ್ತಿಗೆದಾರರು ಕೂಲಿ ನೀಡದೆ ವಂಚಿಸಿದ್ದಾರೆ. ಅವರು ಊಟವಿಲ್ಲದೆ ಪರದಾಡುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ವೇತನ ಚುಕ್ತಾ ಮಾಡಬೇಕು ಮತ್ತು ಗುಣಮಟ್ಟದ ಕಾಮಗಾರಿ ನಡೆಸುವಂತೆ ನಿರ್ದೇಶಿಸಬೇಕು. ಸಾಧ್ಯವಾಗದಿದ್ದರೆ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗುವುದು’ ಎಂದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎನ್.ರಾಮಚಂದ್ರ ಅವರಿಗೆ ಮನವಿ ನೀಡಿದರು.
ಮುಖಂಡರಾದ ಕೆ.ನಂಜಪ್ಪ ಬಸವನಗುಡಿ, ರಾಮು, ಟಿ.ಶ್ರೀನಿವಾಸ್, ಆರ್.ಮಾರ, ಪಿ.ರವಿ, ಸುರೇಶ್, ಮಂಗಳಮ್ಮ, ಲಲಿತಾ, ಎಂ.ಬಿ.ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.