ADVERTISEMENT

ಕಾರಾಗೃಹ: ನವೀಕೃತ ಧ್ಯಾನ ಮಂದಿರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 13:27 IST
Last Updated 1 ಸೆಪ್ಟೆಂಬರ್ 2022, 13:27 IST

ಮೈಸೂರು: ನಗರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮನಪರಿವರ್ತನೆಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದಕ್ಕಾಗಿ ನಿರ್ಮಿಸಿರುವ ಧ್ಯಾನ ಮಂದಿರವನ್ನು ನವೀಕರಿಸಲಾಗಿದ್ದು, ಶಾಸಕ ಎಲ್.ನಾಗೇಂದ್ರ ಈಚೆಗೆ ಉದ್ಘಾಟಿಸಿದರು.

ಇದರೊಂದಿಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಧ್ಯಾನ, ಯೋಗ ಮೊದಲಾದ ಕಾರ್ಯಕ್ರಮಗಳನ್ನು ಪುನರಾರಂಭಿಸಲಾಗಿದೆ. ಈ ಚಟುವಟಿಕೆಗಳು, ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಸ್ಥಗಿತಗೊಂಡಿದ್ದವು.

22 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಧ್ಯಾನ ಮಂದಿರವನ್ನು ಲಯನ್ಸ್‌ ಕ್ಲಬ್‌ ನೆರವಿನಿಂದ ನವೀಕರಿಸಲಾಗಿದೆ. ಈಶ್ವರೀಯ ವಿಶ್ವವಿದ್ಯಾಲಯದ ಸ್ವಯಂಸೇವಕರು ಧ್ಯಾನ ತರಬೇತಿ ನಡೆಸಿಕೊಡುತ್ತಿದ್ದಾರೆ.

ADVERTISEMENT

‘ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದವರು ಕೈದಿಗಳ ಮನಪರಿವರ್ತನೆಗೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಇದೊಂದು ವಿಶೇಷ ಸೇವೆಯಾಗಿದೆ. ಇದನ್ನು ಕೈದಿಗಳು ಸದ್ಬಳಕೆ ಮಾಡಿಕೊಂಡು ಸನ್ನಡತೆ ಬೆಳೆಸಿಕೊಳ್ಳಬೇಕು’ ಎಂದು ನಾಗೇಂದ್ರ ತಿಳಿಸಿದರು.

‘ಧ್ಯಾನ, ಪ್ರಾಣಾಯಾಮ ಹಾಗೂ ಯೋಗದಲ್ಲಿ ಭಾಗವಹಿಸಿದ ಕೆಲವು ಕೈದಿಗಳಲ್ಲಿ ಮನಪರಿವರ್ತನೆ ಆಗಿರುವುದನ್ನು ಗುರುತಿಸಿದ್ದೇವೆ’ ಎಂದು ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ದಿವ್ಯಶ್ರೀ ಹೇಳಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಯೋಜಕಿ ಲಕ್ಷ್ಮಿ, ಡಾ.ಸಂತೋಷ್ ರಂಗನಾಥ್, ಶಾರದಾ ಗುರು, ವೀರಂ ಸಿಂಗ್, ಸತೀಶ, ಆತ್ಮಾನಂದ, ಮಣಿ, ಉಮೇಶ್, ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.