ಸಾಲಿಗ್ರಾಮ: ಪಟ್ಟಣದ ಹೊರ ವಲಯದಲ್ಲಿ ಇರುವ ಪುರಾಣ ಪ್ರಸಿದ್ದ ಯೋಗನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಮಂದಿ ಭಕ್ತರ ಜಯಘೋಷಣೆಯೊಂದಿಗೆ ಭಾನುವಾರ ಬಹಳ ಅದ್ದೂರಿಯಾಗಿ ನಡೆಯಿತು.
ದೇವಾಲಯದ ಪ್ರಾಂಗಣದಲ್ಲಿ ಮಧ್ಯಾಹ್ನದ ವೇಳೆ, ಹೂವಿನಿಂದ ಅಲಂಕೃತಗೊಂಡಿದ್ದ ರಥದಲ್ಲಿ ಯೋಗನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ನೂರಾರು ಮಂದಿ ಭಕ್ತರು ಯೋಗ ನರಸಿಂಹಸ್ವಾಮಿಗೆ ಜಯಘೋಷಣೆ ಕೂಗುತ್ತಾ ಬ್ರಹ್ಮರಥವನ್ನು ದೇವಾಲಯದ ಸುತ್ತ ಎಳೆದು ಸಂಭ್ರಮಿಸಿದರು.
ಮಹಿಳೆಯರು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು. ಕೆಲವು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಯಾದ ಮೇರೆಗೆ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದವನ್ನು ವಿತರಿಸಿರು. ನಂತರ ಬ್ರಹ್ಮರಥವನ್ನು ಪಟ್ಟಣದ ಹೊಸ ಬೀದಿ ಮೂಲಕ ಪೇಟೆ ಬಾಗಿಲಿಗೆ ತಂದು ನಿಲ್ಲಿಸಲಾಯಿತು.
ಬ್ರಹ್ಮರಥಕ್ಕೆ ಪಟ್ಟಣದ ಸಾವಿರಾರು ಮಂದಿ ಭಕ್ತರು ಹಣ್ಣು ಧವನವನ್ನು ಎಸೆದು ಭಕ್ತಿ ತೋರಿದರು. ಉತ್ಸವದಲ್ಲಿ ದೇವಾಲಯದ ಪಾರುಪತ್ತೇದಾರ ಅಂಜನೀಗೌಡ, ಮುಖಂಡರಾದ ಎಸ್.ಅರ್. ರಾಮೇಗೌಡ ಭಾಗವಹಿಸಿದ್ದರು.
Highlights - ನರಸಿಂಹಸ್ವಾಮಿಗೆ ಜಯಘೋಷಣೆ ಮಹಿಳೆಯರಿಂದ ಪೂಜೆ, ಹರಕೆ ಪ್ರಸಾದ ವಿನಿಯೋಗ, ಸಂಭ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.