ಮೈಸೂರು: ‘ಶಿಕ್ಷಣ, ಸರ್ಕಾರಿ ಕೆಲಸದಲ್ಲಿ ಹಿಂದುಳಿದ ಹಾಗೂ ತಳ ವರ್ಗದವರಿಗೆ ಮೀಸಲಾತಿ ಸೌಲಭ್ಯ ನೀಡುವ ಮೂಲಕ ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಮೈಸೂರು ಅರಸರ ಕೊಡುಗೆ ನೀಡಿದ್ದರು. ಅಂತೆಯೇ ಮೈಸೂರು ಗುಣಮಟ್ಟದ ಶಿಕ್ಷಣಕ್ಕೂ ಹೆಸರುವಾಸಿಯಾಗಿದೆ’ ಎಂದು ನಿವೃತ್ತ ಡಿಜಿಪಿ ಶಂಕರ್ ಬಿದರಿ ಬಣ್ಣಿಸಿದರು.
ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಾರದ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಾಜನ ಕಾಲೇಜು ಐತಿಹಾಸಿಕ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿರುವುದು ಅಭಿನಂದನೀಯ’ ಎಂದರು.
‘ಭಾರತ ಹಲವು ಜಾತಿ–ಧರ್ಮಗಳ ನಾಡು. ಇಲ್ಲಿನ ಸಂಸ್ಕೃತಿ–ಭಾಷೆ ವೈವಿಧ್ಯಮಯವಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಸದಾ ಹೊಂದಿರಬೇಕು. ಭಾವೈಕ್ಯದಿಂದ ಕೂಡಿರಬೇಕು. ಯುವ ಜನತೆ ಸದಾ ಶಾಂತಿ, ಸೌಹಾರ್ದದಿಂದ ನಡೆದುಕೊಂಡಾಗ ಮಾತ್ರ ಸಶಕ್ತ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.
‘ಗುರು ದ್ರೋಣಾಚಾರ್ಯ ಎಜ್ಯುಕೇಟರ್ ಆಫ್ ದಿ ಇಯರ್– 2023’ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತೆ ಕ್ಯಾಪ್ಟನ್ ಇಂದ್ರಾಣಿ ಅವರನ್ನು ಸನ್ಮಾನಿಸಲಾಯಿತು.
ಎನ್.ಸಿ.ಸಿ. ಸಂಯೋಜಕ ಟಿ. ಮಣಿಕಂಠ, ವಿದ್ಯಾರ್ಥಿ ಸ್ವಯಂಸೇವಕ ಧೀಮಂತ್, ಚಿರಂತನ್, ಎಂ.ಎಸ್. ಹರ್ಷಿತಾ, ಬಿ. ಕಾರ್ತಿಕ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.
ಕಾಲೇಜಿನ ಪ್ರಾಂಶುಪಾಲೆ ಬಿ.ಆರ್. ಜಯಕುಮಾರಿ, ಶೈಕ್ಷಣಿಕ ಸಲಹೆಗಾರ ಎಸ್.ಆರ್. ರಮೇಶ್, ಮೇಜರ್ ಬಿ.ಆರ್. ನಿಖಿಲ್, ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಆರ್. ತಿಮ್ಮೇಗೌಡ, ಎನ್ಸಿಸಿ ಅಧಿಕಾರಿ ಪಿ.ಜಿ. ಪುಷ್ಪರಾಣಿ, ಸಹಾಯಕ ಪ್ರಾಧ್ಯಾಪಕ ಎನ್. ಸುನಿಲ್ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.