ಮೈಸೂರು: ‘ಕೃಷಿಕ್ ಸಂಸ್ಥೆಯಿಂದ ಗ್ರಾಮೀಣ ಪ್ರದೇಶದ ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ವೃತ್ತಿ ಮಾರ್ಗದರ್ಶನ, ತರಬೇತಿ ನೀಡಲಾಗುತ್ತಿದೆ’ ಎಂದು ಕೃಷಿಕ್ ಸರ್ವೋದಯ ಫೌಂಡೇಶನ್ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಹೇಳಿದರು.
ಇಲ್ಲಿನ ಕೃಷಿಕ್ ಸರ್ವೋದಯ ಫೌಂಡೇಶನ್ನಿಂದ ನಡೆದ 2023–24ರ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಗರಿಕ ಸೇವಾ ಪರೀಕ್ಷೆಯ ಪಠ್ಯ ವಿಷಯ ಮತ್ತು ಪರೀಕ್ಷಾ ವಿಧಾನಗಳಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸಿ ತಜ್ಞರ ಜೊತೆ ಸಮಾಲೋಚಿಸಿ ತರಬೇತಿ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.
‘ಪ್ರತಿ ವರ್ಷ ₹50 ಲಕ್ಷ ಮೊತ್ತದಷ್ಟು ವಿದ್ಯಾರ್ಥಿ ವೇತನವನ್ನು ಎಲ್ಲ ಶಾಖೆಗಳಿಂದ ನೀಡಲಾಗುತ್ತಿದೆ. ಈ ಬಾರಿ ಮೈಸೂರು ಶಾಖೆಯಿಂದ ಮೆಡಿಕಲ್, ಎಂಜಿನಿಯರಿಂಗ್, ಬಿಎ, ಬಿಎಸ್ಸಿ, ಬಿಕಾಂ, ಡಿಪ್ಲೊಮಾ ಮುಂತಾದ ಪದವಿ ಓದುತ್ತಿರುವ 44 ವಿದ್ಯಾರ್ಥಿಗಳಿಗೆ ಒಟ್ಟು ₹7.15 ಲಕ್ಷದಷ್ಟು ವಿದ್ಯಾರ್ಥಿ ವೇತನ ನೀಡಲಾಗಿದೆ’ ಎಂದರು.
ಕೆಎಸ್ಎಫ್ ಕಾರ್ಯದರ್ಶಿ ಎಚ್.ಕಿಶೋರ್ ಚಂದ್ರ, ಪತ್ರಕರ್ತ ಎಸ್.ಟಿ.ರವಿಕುಮಾರ್ ಮಾತನಾಡಿದರು.
ಕೆಎಸ್ಎಫ್ ಆಡಳಿತ ವರ್ಗದ ಎನ್.ನಂಜೇಗೌಡ, ಕೆ.ಎಂ.ಚಂದ್ರೇಗೌಡ, ವೈ.ಕೆ.ಕೆಂಚೇಗೌಡ, ಎಸ್.ವಿ.ಗೌಡಪ್ಪ, ಜಿ.ಗೋವಿಂದರಾಜು, ಜ್ಯೋತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.