ಮೈಸೂರು: ‘ದೇಶದ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಿದೆ’ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಪ್ರತಿಪಾದಿಸಿದರು.
ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಖಾತ್ರಿ ಘಟಕವು (ಐಕ್ಯೂಎಸಿ) ಸೋಮವಾರ ಆಯೋಜಿಸಿದ್ದ ‘ಪ್ರೊ.ಎಚ್.ಶೇಖರ್ ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.
‘ಬಡತನದ ನಿರ್ಮೂಲನೆ ಆಗಲು ವಿಜ್ಞಾನ ಹಾಗೂ ತಂತ್ರಜ್ಞಾನದ ಅಭಿವೃದ್ಧಿ ಆಗಬೇಕೆಂದು ಮೊದಲ ಪ್ರಧಾನಿ ನೆಹರೂ ಹೇಳಿದ್ದರು. ದೇಶವು ಸಾಕಷ್ಟು ಅಭಿವೃದ್ಧಿ ಸಾಧಿಸಲು ವಿಜ್ಞಾನಿಗಳು ಹಾಗೂ ತಂತ್ರಜ್ಞರ ಕಾಣ್ಕೆಯಿದೆ. ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳು ಬರುತ್ತಿವೆ. ವಿಜ್ಞಾನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡವರು ಮೂರ್ಖರೊಂದಿಗೆ ವಾದ ಮಾಡಿ ಸಮಯ ವ್ಯರ್ಥ ಮಾಡಬಾರದು. ಹುಲ್ಲು ನೀಲಿ ಬಣ್ಣದ್ದೆನ್ನುವ ಮೂರ್ಖ ಕತ್ತೆಯೊಂದಿಗೆ ವಾದಕ್ಕಿಳಿಯುವ ಹುಲಿಯಂತೆ ನಾವಾಗಬಾರದು’ ಎಂದು ಉದಾಹರಿಸಿದರು.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಅಪ್ಪಾರಾವ್ ಪೊಡಿಲೆ, ‘ಹಸಿರಿನಿಂದ ಕಂಗೊಳಿಸುವ ಸಸ್ಯಗಳೂ ಕೀಟಭಾದೆಯನ್ನು ಎದುರಿಸುತ್ತಿರುತ್ತವೆ. ಆದರೆ, ರೋಗ ನಿರೋಧಕ ಶಕ್ತಿಯನ್ನು ಅವು ಹೊಂದಿದ್ದು, ಪ್ರತಿಯೊಂದು ಸಸ್ಯ ಕೋಶವೂ ಸ್ವಯಂ ರಕ್ಷಿಸಿಕೊಳ್ಳುವ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಂಡಿರುತ್ತವೆ’ ಎಂದರು.
‘ರೋಗಭಾದೆಗಳಿಂದ ರಕ್ಷಿಸಿಕೊಳ್ಳುವ ಸಸ್ಯಗಳ ಬಗ್ಗೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ವಿಜ್ಞಾನ ವಿದ್ಯಾರ್ಥಿಗಳು ಕುತೂಹಲಿಗಳಾಗಬೇಕು. ಅಧ್ಯಯನ ಹಾಗೂ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ‘ಮೈಸೂರು ವಿಶ್ವವಿದ್ಯಾಲಯವು ಸಂಶೋಧನೆ ಹಾಗೂ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. 15 ದತ್ತಿ ಉಪನ್ಯಾಸ ಸರಣಿ ನಡೆಯುತ್ತಿವೆ. 540 ಚಿನ್ನದ ಪದಕ ಹಾಗೂ 50 ನಗದು ಬಹುಮಾನಗಳನ್ನು ದಾನಿಗಳ ನೆರವಿನಿಂದ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ವಿಜ್ಞಾನ, ತಂತ್ರಜ್ಞಾನ, ಕಲೆ, ವಾಣಿಜ್ಯ ಹಾಗೂ ಕಾನೂನು ವಿಷಯಗಳಲ್ಲಿ ಉಪನ್ಯಾಸಗಳು ನಡೆಯುತ್ತಿವೆ. ಇವು ವರ್ತಮಾನದ ಬೆಳವಣಿಗೆಯ ಬಗ್ಗೆ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತವೆ. ನುರಿತ ತಜ್ಞರ ಸಲಹೆ ಪಡೆದು ಉನ್ನತ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.
ಕುಲಸಚಿವೆ ವಿ.ಆರ್.ಶೈಲಜಾ, ಸಂಯೋಜಕ ಪ್ರೊ.ಕೆ.ಎನ್.ಅಮೃತೇಶ್, ಪ್ರೊ.ಎಚ್.ಶೇಖರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.