ADVERTISEMENT

ಹುಣಸೂರು: ಪಾಲಿಹೌಸ್ ಕೃಷಿಯಲ್ಲಿ ಖುಷಿ ಕಂಡ ರೈತ

ಹರೀನಹಳ್ಳಿಯ ಕೃಷಿಕ ಕಿಶೋರ್ ದಂಪತಿಯ ಯಶೋಗಾಥೆ

ಎಚ್.ಎಸ್.ಸಚ್ಚಿತ್
Published 24 ಅಕ್ಟೋಬರ್ 2024, 7:39 IST
Last Updated 24 ಅಕ್ಟೋಬರ್ 2024, 7:39 IST
<div class="paragraphs"><p>ಹುಣಸೂರು ತಾಲ್ಲೂಕಿನ ಹರೀನಹಳ್ಳಿಯಲ್ಲಿ ಕಿಶೋರ್ ಮತ್ತು ಶಿಬಿ ಕಿಶೋರ್ ದಂಪತಿ ಪಾಲಿ ಹೌಸ್‌ನಲ್ಲಿ ತಾವು ಬೆಳೆದ ಯುರೋಪಿಯನ್ ಸೌತೆಕಾಯಿ ಬೆಳೆ ಕಟಾವಿನಲ್ಲಿ ತೊಡಗಿರುವುದು (ಎಡಚಿತ್ರ). ಪಾಲಿಹೌಸ್ ನಲ್ಲಿ ಬೆಳೆದ ಯುರೋಪಿಯನ್ ಕ್ಯಾಪ್ಸಿಕಂ</p></div>

ಹುಣಸೂರು ತಾಲ್ಲೂಕಿನ ಹರೀನಹಳ್ಳಿಯಲ್ಲಿ ಕಿಶೋರ್ ಮತ್ತು ಶಿಬಿ ಕಿಶೋರ್ ದಂಪತಿ ಪಾಲಿ ಹೌಸ್‌ನಲ್ಲಿ ತಾವು ಬೆಳೆದ ಯುರೋಪಿಯನ್ ಸೌತೆಕಾಯಿ ಬೆಳೆ ಕಟಾವಿನಲ್ಲಿ ತೊಡಗಿರುವುದು (ಎಡಚಿತ್ರ). ಪಾಲಿಹೌಸ್ ನಲ್ಲಿ ಬೆಳೆದ ಯುರೋಪಿಯನ್ ಕ್ಯಾಪ್ಸಿಕಂ

   

ಹುಣಸೂರು: ಇಸ್ರೇಲ್ ಪ್ರವಾಸಕ್ಕೆ ತೆರಳುವವರು ಬಹುತೇಕ ಅಲ್ಲಿನ ಪ್ರಾಕೃತಿಕ ಸೌಂದರ್ಯ, ಜನಜೀವನ ವೀಕ್ಷಿಸಿ ಸಂತೋಷಪಟ್ಟು ಹಿಂದಿರುಗುವವರೆ ಹೆಚ್ಚು. ಆದರೆ ಇಲ್ಲೊಂದು ದಂಪತಿ ಆ ದೇಶದ ಪಾಲಿಹೌಸ್ ಬೇಸಾಯ ಕಂಡು ಅದೇ ಮಾದರಿಯಲ್ಲಿ ಕೃಷಿ ಮಾಡುವ ಹುಮ್ಮಸ್ಸಿನಲ್ಲಿ ಬೆಂಗಳೂರಿನ ಉದ್ಯೋಗ ಬಿಟ್ಟು ಮಾದರಿ ಕೃಷಿಕರಾಗಿ ಯಶಸ್ವಿಯಾಗಿದ್ದಾರೆ.

ಮೂಲತಃ ಕೊಡಗಿನವರಾದ ರೈತ ಕಿಶೋರ್ ಹಾಗೂ ಶಿಬಿ ದಂಪತಿ ಬೆಂಗಳೂರಿನ ಯಾಂತ್ರಿಕ ಜೀವನಕ್ಕೆ ರೋಸಿ ಹೋಗಿ ಕೃಷಿಯತ್ತ ಮುಖ ಮಾಡಿದರು. ತಾಲ್ಲೂಕಿನ ಹರೀನಹಳ್ಳಿಯಲ್ಲಿ 5 ಎಕರೆ ಭೂಮಿ ಖರೀದಿಸಿ ಹೈನುಗಾರಿಕೆ ಆರಂಭಿಸಿ ಉತ್ತಮ ಹಾಲು ಉತ್ಪಾದಕರಾದರು.

ADVERTISEMENT

2014ರಲ್ಲಿ ಇಸ್ರೇಲ್ ಪ್ರವಾಸ ಕೈಗೊಂಡ ಇವರು, ಅಲ್ಲಿನ ರೈತರೊಂದಿಗೆ ಪಾಲಿ ಹೌಸ್ ಫಾರ್ಮಿಂಗ್ ಘಟಕಕ್ಕೆ ಭೇಟಿ ನೀಡಿ ವೈಜ್ಞಾನಿಕ ಬೇಸಾಯ ಪದ್ಧತಿ ಹಾಗೂ ಹನಿ ನೀರಾವರಿ ಬಳಕೆ ಕುರಿತು ಮಾಹಿತಿ ಸಂಗ್ರಹಿಸಿದರು. ಪ್ರವಾಸದಿಂದ ಹಿಂದಿರುಗಿ ತೋಟಗಾರಿಕೆ ಇಲಾಖೆ ಸಂಪರ್ಕಿಸಿ ಸಲಹೆ ಮತ್ತು ಸರ್ಕಾರಿ ಸವಲತ್ತು ಬಳಸಿ ಪಾಲಿಹೌಸ್ ನಿರ್ಮಿಸಲು ಮುಂದಾದರು.  

2015ರಲ್ಲಿ ತೋಟಗಾರಿಕೆ ಇಲಾಖೆ ಶೇ50ರಷ್ಟು ಪ್ರೋತ್ಸಾಹಧನದಲ್ಲಿ ಪಾಲಿಹೌಸ್ ಯೋಜನೆ 1 ಎಕರೆಯಲ್ಲಿ ತಲೆ ಎತ್ತಿ ನಿಂತು ಇಸ್ರೇಲ್ ಪ್ರವಾಸದಲ್ಲಿ ಕಂಡ ಕನಸು ನನಸಾಗಿಸುವಲ್ಲಿ ಸಫಲರಾಗಿ, ಬೇಸಾಯಕ್ಕೆ ಪೂರ್ವ ಸಿದ್ಧತೆ ನಡೆಸಿದರು. ಕಳೆದ 9 ವರ್ಷದಿಂದ ನಿರಂತರ ಯೂರೋಪಿಯನ್ ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ) ಮತ್ತು ಯುರೋಪಿಯನ್ ಕುಕುಂಬರ್ (ಸೌತೆಕಾಯಿ) ಬೇಸಾಯ ಯಶಸ್ವಿಯಾಗಿ ನಡೆಸಿದ್ದಾರೆ.

ಪಾಲಿ ಹೌಸ್ ಬೇಸಾಯದಲ್ಲಿ ಬಂಡವಾಳ ಹೂಡಿ ಕೂಲಿ ಆಳು ನಂಬಿ ಕೂರುವಂತಿಲ್ಲ. ಮಾಲೀಕರು ಅವರೊಂದಿಗೆ ಶ್ರಮದಾನ ಮಾಡಿದಲ್ಲಿ ಯಶಸ್ವಿ ಕಾಣಬಹುದು ಎನ್ನುವರು.

ಹನಿ ನೀರಾವರಿ ಪದ್ಧತಿ ಹಾಗೂ ಸಾವಯವ ಪದ್ಧತಿಯಲ್ಲಿ ಮಣ್ಣಿನಲ್ಲಿ ಸೂಕ್ಷ್ಮ ಜೀವಿ ವೃದ್ಧಿಸಲು ಜೀವಾಮೃತ, ಒಣಮೀನಿನಿಂದ ಸಿದ್ಧಪಡಿಸಿದ ಫಿಷರ್ ಅಮೈನೋ ಆಸಿಡ್‌ನ್ನು ಹನಿ ನೀರಾವರಿಯಲ್ಲಿ ನೀಡುವುದರಿಂದ ಮಣ್ಣಿನಲ್ಲಿ ಸೂಕ್ಷ್ಮ ಜೀವಿ ಹೆಚ್ಚಾಗಿ ಉತ್ತಮ ಫಸಲು ಪಡೆಯಬಹುದು. ಇಷ್ಟಲ್ಲದೆ ಎನ್.ಪಿ.ಕೆ ಗೊಬ್ಬರ, ಮೈಕ್ರೋ ನ್ಯೂಟ್ರಿಯಂಟ್ ನೀಡುವುದರಿಂದ ಇಳುವರಿ ಹೆಚ್ಚಲಿದೆ ಎನ್ನುತ್ತಾರೆ ದಂಪತಿ.

ಕೆಂಪು, ಹಳದಿ ಮತ್ತು ಹಸಿರು ಬಣ್ಣದಿಂದ ಕೂಡಿದ ಕ್ಯಾಪ್ಸಿಕಂಗೆ ವರ್ಷ ಪೂರ್ತಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ದಪ್ಪ ಮೆಣಸಿನಕಾಯಿ ಸಸಿ ಖಾಸಗಿ ನರ್ಸರಿಯಲ್ಲಿ ಪ್ರತಿ ಸಸಿಗೆ ₹ 11 ರಿಂದ ₹12ರಂತೆ ಖರೀದಿಸುತ್ತಾರೆ. ಒಂದು ಎಕರೆಗೆ 10 ಸಾವಿರ ಸಸಿ ನಾಟಿ ಬೇಕಾಗುತ್ತದೆ. ನಾಟಿ ಮಾಡಿದ 90 ದಿನದ ಬಳಿಕ ಫಸಲು ಬಿಡಲಾರಂಭಿಸಿ ಪ್ರತಿ 5ದಿನಕ್ಕೆ ಒಮ್ಮೆ ಕಟಾವು ಮಾಡಬಹುದು. ಈ ಬೆಳೆ 6 ರಿಂದ 8 ತಿಂಗಳು ಸಿಗಲಿದೆ.

‘ಯುರೋಪಿಯನ್ ಸೌತೆಕಾಯಿ ಎರಡು ತಿಂಗಳ ಬೆಳೆಯಾಗಿದ್ದು, ನಾಟಿ ಮಾಡಿದ 45 ದಿನಕ್ಕೆ ಫಸಲು ಕಟಾವಿಗೆ ಬರಲಿದೆ. ಎರಡು ದಿನಕ್ಕೆ ಒಮ್ಮೆ ಕಟಾವು ಮಾಡುವುದರಿಂದ 2 ತಿಂಗಳಿಗೆ 30 ಟನ್ ಫಸಲು ಸಿಗುತ್ತದೆ. ಈ ಬೆಳೆ ಕೇರಳ, ಗುಜರಾತ್, ದೆಹಲಿಯಲ್ಲಿ ಭಾರಿ ಬೇಡಿಕೆ ಇದೆ’ ಎನ್ನುತ್ತಾರೆ ದಂಪತಿ.

‘ಬಂಡವಾಳ ಹೂಡಿ ಕೂಲಿ ಕಾರ್ಮಿಕರಂತೆ ದುಡಿಯುತ್ತೇವೆ. ದಿನಗೂಲಿ ₹ 2 ಸಾವಿರ ಉಳಿತಾಯವಾಗಲಿದೆ. ವರ್ಷ ಪೂರ್ತಿ ನಾವು ಉಳಿಸುವ ಹಣದಿಂದ ವರ್ಷದ ಅಂತ್ಯದಲ್ಲಿ ಪ್ರವಾಸ ಮಾಡುವ ಹವ್ಯಾಸ ರೂಢಿಯಲ್ಲಿದೆ’ ಎನ್ನುವರು.

‘ಆರಂಭಿಕ ಬಂಡವಾಳ ಹೇರಳ, ಲಾಭವೂ ಅಧಿಕ’

‘ಪಾಲಿ ಹೌಸ್ ಬೇಸಾಯಕ್ಕೆ ಆರಂಭಿಕ ಬಂಡವಾಳ ಹೇರಳವಾಗಿ ಬೇಕಿದ್ದು, ಅಷ್ಟೇ ಲಾಭವೂ ಸಿಗಲಿದೆ. ಒಂದು ಎಕರೆ ದಪ್ಪ ಮೆಣಸಿನಕಾಯಿ ಬೆಳೆಯಲು ₹4 ರಿಂದ ₹5 ಲಕ್ಷ ಖರ್ಚು ತಗಲುವುದು. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ಸರಾಸರಿ ₹100 ಸಿಗಲಿದ್ದು, ಪ್ರತಿ ಕಟಾವಿಗೂ ₹1000 ದಿಂದ 1200 ಕೆ.ಜಿ ಇಳುವರಿ ಸಿಗುವುದರಿಂದ 8 ತಿಂಗಳಿಗೆ ಖರ್ಚು ಕಳೆದು ₹30 ಲಕ್ಷ ಆದಾಯ ಸಿಗಲಿದೆ. ಸೌತೆಕಾಯಿಗೆ ಎಕರೆಗೆ ₹2 ಲಕ್ಷ ಬಂಡವಾಳ ಹೂಡಿ ಕನಿಷ್ಠ ₹6 ರಿಂದ ₹7 ಲಕ್ಷ ಎರಡು ತಿಂಗಳಿಗೆ ದುಡಿಯುತ್ತಿದ್ದೇವೆ’ ಎಂದು ಪ್ರಗತಿಪರ ರೈತ ಕಿಶೋರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಯೊಂದು ಕ್ಷೇತ್ರದಲ್ಲೂ ಸವಾಲುಗಳಿದ್ದು, ಅದನ್ನು ಮೀರಿ ಬೆಳೆಯುವ ಮನಸ್ಥಿತಿ ಇದ್ದರೆ ಗ್ರಾಮೀಣ ಪರಿಸರದಲ್ಲೂ ನೆಮ್ಮದಿಯ ಐಷಾರಾಮಿ ಜೀವನ ಸಾಧ್ಯ
. ಕಿಶೋರ್, ಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.