ಮೈಸೂರು: ‘ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧರ್ಮದ ಹೆಸರಲ್ಲಿ ಮತಯಾಚನೆ ಮಾಡಿದ್ದು, ಚುನಾವಣಾ ಆಯೋಗ ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಆಗ್ರಹಿಸಿದ್ಧಾರೆ.
‘ಜನತೆ ತಮ್ಮ ಪರವಾಗಿಲ್ಲ ಎಂಬುದನ್ನು ಅರಿತಿರುವ ಮೋದಿಯವರು ಧರ್ಮ ರಾಜಕಾರಣದ ಮೊರೆ ಹೋಗಿದ್ದಾರೆ. ಚುನಾವಣಾ ಆಯೋಗವು ಒಂದಿಷ್ಟಾದರೂ ನೈತಿಕತೆ ಉಳಿಸಿಕೊಂಡಿದ್ದರೆ ಇಂಥ ಪ್ರಚೋದನಾಕಾರಿ ಭಾಷಣದ ವಿರುದ್ಧ ಕ್ರಮವಹಿಸಬೇಕು’ ಎಂದು ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
‘ದೇಶದ ಪ್ರಧಾನಿಯಾಗಿದ್ದರೂ ಸಮಾವೇಶದಲ್ಲಿ ನಿರ್ಲಜ್ಜರಾಗಿ ಸುಳ್ಳು ಹೇಳಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷವನ್ನು ದೇಶ ದ್ರೋಹಿ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಪಕ್ಷ ಎಂದು ಬಿಂಬಿಸುವ ಮೂಲಕ ಅರಾಜಕ ಗುಂಪಿನ ನಾಯಕನಂತೆ ವರ್ತಿಸಿದ್ದಾರೆ. ‘ತುಕ್ಡೆ ತುಕ್ಡೆ ಗ್ಯಾಂಗ್ ಎಂಬುದೇ ಇಲ್ಲ’ ಎಂಬ ಇವರದೇ ಗೃಹ ಇಲಾಖೆ ಸ್ಪಷ್ಟನೆಯನ್ನೂ ಮರೆತು ಮಾತನಾಡಿದ್ದಾರೆ. ಈ ಕೃತ್ಯಕ್ಕಾಗಿ ಶಿಕ್ಷೆಗೆ ಅರ್ಹರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಿಜೆಪಿ ಪ್ರಣಾಳಿಕೆಯನ್ನು ಕ್ರಾಂತಿಕಾರಿ ಎಂದು ಬಣ್ಣಿಸುವ ಮೂಲಕ ಜನರಿಗೆ ಮತ್ತೊಮ್ಮೆ ಮಂಕುಬೂದಿ ಎರಚಲು ಸಿದ್ಧರಾಗಿದ್ದಾರೆ. ಈ ಹಿಂದೆ 2022ರೊಳಗೆ ಎಲ್ಲರಿಗೂ ಮನೆ ಎಂದಿದ್ದರು. ಈಗ ಮುಂದಿನ ಐದು ವರ್ಷಗಳಲ್ಲಿ 3 ಕೋಟಿ ಬಡವರಿಗೆ ಮನೆ ನಿರ್ಮಿಸುತ್ತೇನೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಮಾತೃಹೃದಯಿ ಗ್ಯಾರಂಟಿಗಳನ್ನು ಟೀಕಿಸುತ್ತಲೇ, ಅದೇ ಪದವನ್ನು ಕದ್ದು ಸರ್ಕಾರ ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ಪ್ರಬುದ್ಧ ಜನತೆ ಮೋದಿ ಮತ್ತು ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಬೆಲೆ ಕೊಡದೇ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.