ಮೈಸೂರು: ನಗರದ ಎನ್ಐಇ ಸೌತ್ ವಿದ್ಯಾರ್ಥಿ ಆಯುಷ್ ಪಿ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಐಟಿ ಶಿಕ್ಷಣ ಮಾನದಂಡಗಳ ಮಂಡಳಿ (ಬೈಟ್ಸ್) ವತಿಯಿಂದ ನಡೆಸಿದ 15ನೇ ಆವೃತ್ತಿಯ ‘ಟಿಸಿಎಸ್ ಟೆಕ್ ಬೈಟ್ಸ್’– ಐಟಿ ರಸಪ್ರಶ್ನೆ ಮೈಸೂರು ಪ್ರಾದೇಶಿಕ ಫೈನಲ್ನ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನ ಆರ್ಎನ್ಎಸ್ ತಾಂತ್ರಿಕ ಕಾಲೇಜಿನ ಆದಿತ್ಯ ಜೆ. ಶೆಟ್ಟಿ ರನ್ನರ್ಅಪ್ ಸ್ಥಾನ ಗಳಿಸಿದ್ದಾರೆ.
ಟಿಸಿಎಸ್ ವಿಜೇತರಿಗೆ ₹12 ಸಾವಿರ ಮೌಲ್ಯದ ಉಡುಗೊರೆ ವೋಚರ್ ಮತ್ತು ರನ್ನರ್ಅಪ್ಗೆ ₹10 ಸಾವಿರ ಮೌಲ್ಯದ ವೋಚರ್ಗಳನ್ನು ನೀಡಿದೆ. ಫೈನಲ್ ತಲುಪಿದ ಎಲ್ಲ ಸ್ಪರ್ಧಿಗಳಿಗೂ ಉಡುಗೊರೆ ವೋಚರ್ಗಳನ್ನು ಕೊಟ್ಟಿದೆ.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಹಾರಾಜ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಬಿ.ಜಿ. ನರೇಶ್ಕುಮಾರ್ ವಿಜೇತರಿಗೆ ಬಹುಮಾನ ವಿತರಿಸಿದರು. ವಿಜೇತರು ಏ.5ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಫೈನಲ್ನಲ್ಲಿ ಮೈಸೂರನ್ನು ಪ್ರತಿನಿಧಿಸಲಿದ್ದಾರೆ.
ಪ್ರಾಥಮಿಕ ಲಿಖಿತ ಪರೀಕ್ಷೆಯಲ್ಲಿ ಮೈಸೂರು ವಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಮೊದಲ ಆರು ಮಂದಿ ಸಂವಾದಾತ್ಮಕ ರಸಪ್ರಶ್ನೆಗೆ ಅರ್ಹತೆ ಗಳಿಸಿದ್ದರು. ರಸಪ್ರಶ್ನೆಯು ಟೆಕ್ ಡ್ಯಾಶ್ಬೋರ್ಡ್, ಟೆಕ್ ಗುರುತಿಸುವಿಕೆ, ಡೇಟಾ ವರ್ಲ್ಡ್, ಟೆಕ್ ಸಂಪರ್ಕಗಳು ಮತ್ತು ಜನರೇಟಿವ್ ಒಳನೋಟಗಳು ಎಂಬ ವಿಭಾಗಗಳಲ್ಲಿ ನಡೆದಿತ್ತು. ಇದು ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಕುರಿತ ಜ್ಞಾನವನ್ನು ಪರೀಕ್ಷಿಸಿತು.
ಟಿಸಿಎಸ್ ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ ಮಾತನಾಡಿ, ‘ಟಿಸಿಎಸ್ ಟೆಕ್ ಬೈಟ್ಸ್ ಸ್ಪರ್ಧೆಯು ಬದಲಾಗುತ್ತಿರುವ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದೆ’ ಎಂದರು.
‘ಬೈಟ್ಸ್’ ಅಧ್ಯಕ್ಷ ಪ್ರೊ.ಎಸ್.ಸಡಗೋಪನ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.