ಮೈಸೂರು: ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರಿನಿಂದ ಹಲವರು ಅಸ್ವಸ್ಥರಾದ ಬಳಿಕ ಬೋಗಾದಿ ಪಟ್ಟಣ ಪಂಚಾಯಿತಿ ಘಟನೆಯ ಬಳಿಕ ಎಚ್ಚೆತ್ತುಕೊಂಡಿದ್ದು, ಗ್ರಾಮದಲ್ಲಿ ಪೌರಕಾರ್ಮಿಕರ ಮೂಲಕ ಸ್ವಚ್ಛತೆ ಕಾರ್ಯ ನಡೆಸುತ್ತಿದೆ. ರಸ್ತೆ ಮಧ್ಯೆ ಇರುವ ಯುಡಿಜಿ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಕೆ.ಸಾಲುಂಡಿಗೆ ಬರಲಿದ್ದು, ರಸ್ತೆಗಳನ್ನೂ ದುರಸ್ತಿಗೊಳಿಸಲಾಗುತ್ತಿದೆ.
ಕೆ.ಸಾಲುಂಡಿಯಲ್ಲಿ 212 ಮನೆಗಳಿದ್ದು, 989 ಜನ ವಾಸಿಸುತ್ತಿದ್ದಾರೆ. ನಂಜರಾಜಯ್ಯನ ಹುಂಡಿಯಲ್ಲಿ 80 ಮನೆಗಳಿದ್ದು, 400 ಜನ ವಾಸಿಸುತ್ತಿದ್ದಾರೆ. ಇದರಲ್ಲಿ 92 ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದ್ದು, 37 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಒಆರ್ಎಸ್ ನೀಡುತ್ತಿದ್ದಾರೆ.
ವಾಂತಿ, ಭೇದಿ ಕಾಣಿಸಿಕೊಂಡವರನ್ನು ಗ್ರಾಮದಲ್ಲಿ ನಿರ್ಮಿಸಿರುವ ಕ್ಲಿನಿಕ್ಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಕಸ ಸಂಗ್ರಹ ವಾಹನದ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ ಮಾತನಾಡಿ, ‘ವಾಂತಿ, ಭೇದಿ ಕಾಣಿಸುಕೊಳ್ಳುತ್ತಿರುವವರ ಸಂಖ್ಯೆ ಇಳಿಮುಖವಾಗುತ್ತಿದೆ. ನೀರಿನಾಂಶ ಸರಿದೂಗಿಸಲು ಒಆರ್ಎಸ್ ನೀಡುತ್ತಿದ್ದೇವೆ. ಒಂದು ಕಾಲರಾ ಪ್ರಕರಣ ಕಂಡುಬಂದರೂ ಎಲ್ಲರಿಗೂ ಕಾಲರಾಕ್ಕೆ ನೀಡುವ ಚಿಕಿತ್ಸೆಯನ್ನೇ ನೀಡುತ್ತಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.