ಮೈಸೂರು: ‘ದಸರಾ ಉರ್ದು ಕವಿಗೋಷ್ಠಿಯನ್ನು ಅ.8ರಂದು ರಾತ್ರಿ 9ಕ್ಕೆ ಇಲ್ಲಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುವುದು’ ಎಂದು ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು.
ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉರ್ದು ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ದೇಶದ ಪ್ರಮುಖ ಉರ್ದು ಕವಿಗಳಾದ ಇಮ್ರಾನ್ ಪ್ರತಾಪ್ ಘರ್ಹಿ, ಸಂಪತ್ ಸರಳ್, ಉತ್ತರ ಪ್ರದೇಶದ ಶಾಂಭವಿ ಸಿಂಗ್, ನದೀಂ ಫಾರುಖ್ ನಿಜಾಮತ್, ಅಬುಜರ್ ನವೀದ್, ಜಮೀಲ್ ಅಸ್ಗರ್ ಭಾಗವಹಿಸುವರು. ಮೆಹಜಬೀನ್ ನಜಮ್ ಗಜಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ತನ್ವೀರ್ ಸೇಠ್ ಭಾಗವಹಿಸುವರು’ ಎಂದು ಮಾಹಿತಿ ನೀಡಿದರು.
‘ರಾಜ್ಯದ ಕವಿಗಳಾದ ಅಮೀರ್ ಜಾನ್ ಅಮೀರ್, ಹಕೀಂ ಸಯ್ಯದ್, ಮೊಮಿನಾ ಮುಕ್ತಾರ್ ಸೂಫಿ, ಮುಬಾರಕ್, ಮೊಹಮ್ಮದ್ ರಫಿ ಭಾಗವಹಿಸುವರು. ಕಾರ್ಯಕ್ರಮ ಅಹೋರಾತ್ರಿ ನಡೆಯಲಿದೆ. ಗೋಷ್ಠಿಗೆ ಅಂದಾಜು ₹15 ಲಕ್ಷದಿಂದ ₹20 ಲಕ್ಷ ವೆಚ್ಚವಾಗಲಿದ್ದು, ಪ್ರಾಯೋಜಕರನ್ನು ಎದುರು ನೋಡುತ್ತಿದ್ದೇವೆ. 3 ಸಾವಿರಕ್ಕೂ ಅಧಿಕ ಆಸನ ವ್ಯವಸ್ಥೆ ಮಾಡಲಾಗುತ್ತದೆ. ರಾತ್ರಿ 9ರ ಬಳಿಕ ಗೋಷ್ಠಿಗೆ ಆಗಮಿಸುವವರಿಗೆ ಪ್ರಾಧಿಕಾರದ ಆವರಣ ಪ್ರವೇಶ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು’ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಅಕ್ರಂ, ಮೋಹಿದಿನ್ ಪಾಷ, ಪಾಲಿಕೆ ಮಾಜಿ ಅಧ್ಯಕ್ಷ ಸುಹೇಲ್ ಬೇಗ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.