ಎಚ್.ಡಿ.ಕೋಟೆ: ‘ಜುಲೈ 1ರಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನ ಚಾಲಕರಿಗೆ ಸ್ವಯಂ ಚಾಲಿತ ದಂಡ ವಿಧಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದರೂ ಕೂಡ ಸಂಚಾರಿ ನಿಯಮ ಉಲ್ಲಂಘನೆ ನಿಂತಿಲ್ಲ’ ಎಂದು ಪೊಲೀಸ್ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ತಿಳಿಸಿದರು.
ಪೊಲೀಸ್ ಇಲಾಖೆಯಿಂದ ಪಟ್ಟಣದಿಂದ ಹ್ಯಾಂಡ್ ಪೋಸ್ಟ್ವರೆಗೆ ಸಂಚಾರಿ ನಿಯಮ ಉಲ್ಲಂಘನೆ ಬಗ್ಗೆ ಪಟ್ಟಣ ಪೊಲೀಸ್ ಠಾಣೆ ಮುಂಭಾಗ ಭಾನುವಾರ ಹಮ್ಮಿಕೊಂಡಿದ್ದ ಪೊಲೀಸ್ ಸಿಬ್ಬಂದಿ ಬೈಕ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಪೊಲೀಸ್ ಇಲಾಖೆಯಿಂದ ಸ್ವಯಂ ಚಾಲಿತ ಸಂಚಾರಿ ದಂಡ ವಿಧಿಸಲು ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜುಲೈ 1ರಿಂದ ಪ್ರಕ್ರಿಯೆ ಚಾಲನೆಯಲಿದ್ದರೂ ಕೂಡ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು, ವಾಹನ ಸವಾರರು ಬೆಲ್ಟ್ ಹಾಕದೆ ಚಾಲನೆ ಮಾಡುವುದು, ಅಲ್ಲದೆ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದು ಸೇರಿದಂತೆ ಸಂಚಾರಿ ನಿಯಮ ಉಲ್ಲಂಘನೆ ಆಗುತ್ತಿದೆ. ವಾಹನ ಸವಾರರ ಮನೆಗಳಿಗೆ ಸ್ವಯಂ ಚಾಲಿತ ದಂಡದ ರಸೀದಿ ಮನೆಗಳಿಗೆ ತಲುಪುತ್ತಿದ್ದರೂ ಕೂಡ ಸಾರ್ವಜನಿಕರು ಇನ್ನೂ ಕೂಡ ಎಚ್ಚರಿಕೆ ವಹಿಸುತ್ತಿಲ್ಲ. ಆದ್ದರಿಂದ ಇಲಾಖೆಯಿಂದ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
‘ವಾಹನ ಚಾಲಕರು ಇನ್ನು ಮುಂದೆ ಬಹಳ ಜಾಗೃತಿಯಿಂದ ವಾಹನವನ್ನು ಚಲಾಯಿಸಬೇಕು, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಬೇಕು, ವಾಹನ ಚಾಲಕರು ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು, ಚಲಾಯಿಸುವುದು ಮಾಡಬಾರದು, ವಾಹನ ಚಾಲಕರು ವಾಹನಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರನ್ನು ಪತ್ತೆ ಹಚ್ಚಿ, ದಂಡವನ್ನು ಕಟ್ಟದೆ ಇರುವಂತ ವಾಹನಗಳನ್ನು ವಶಕ್ಕೆ ಪಡೆದು ದಂಡ ವಸೂಲಿ ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಸಂಚಾರಿ ನಿಯಮ ಪಾಲಿಸಬೇಕು’ ಎಂದು ಸಲಹೆ ನೀಡಿದರು.
ಜಾಥಾದಲ್ಲಿ ಎಸ್ಐ ಪ್ರಕಾಶ್, ಸುರೇಶ್ ನಾಯಕ್, ಮಹದೇವಸ್ವಾಮಿ ಮತ್ತು ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.