ಮೈಸೂರು: ‘ಕಾಂಗ್ರೆಸ್ ದ್ವೇಷದ ರಾಜಕಾರಣ ಕಲಿಸಿಕೊಡುತ್ತಿದ್ದು, ನಾವೂ ಕಲಿಯುತ್ತೇವೆ. ಸಮಯ ಬಂದಾಗ ಕಲಿಸಿಕೊಡುತ್ತೇವೆ’ ಎಂದು ಸಂಸದ ಕೆ.ಸುಧಾಕರ್ ಹೇಳಿದರು.
‘ಸರ್ಕಾರ ಹಾಗೂ ಅಧಿಕಾರ ಬದಲಾಗುತ್ತಿರುತ್ತದೆ. 16 ತಿಂಗಳ ಹಿಂದೆ ನಾವು ಮೂರು ವರ್ಷ ಅಧಿಕಾರದಲ್ಲಿದ್ದೆವು. ನಮ್ಮ ಅವಧಿಯಲ್ಲಿ ದ್ವೇಷದ ರಾಜಕಾರಣ ಮಾಡಿಲ್ಲ. ತನಿಖಾ ಅಸ್ತ್ರವಿಟ್ಟುಕೊಂಡು ಯಾರನ್ನೂ ಬೆದರಿಸಿಲ್ಲ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನ್ನು ಸ್ವಾಗತಿಸುವೆ. ಕೋವಿಡ್ ವಿಚಾರದಲ್ಲಿ ನಾವು ಯಾವುದನ್ನೂ ಮುಚ್ಚಿಟ್ಟಿಲ್ಲ. ಅವರ ಕೈಯಲ್ಲಿ ಪೆನ್ನು, ಪುಸ್ತಕ, ಪೊಲೀಸ್ ಇಲಾಖೆ, ಸರ್ಕಾರ ಎಲ್ಲವೂ ಇದೆ. ಯಾವ ಕ್ರಮವಾದರೂ ತೆಗೆದುಕೊಳ್ಳಲಿ. ಕುರ್ಚಿ ಹೋದ ಮೇಲೆ ಏನು ಮಾಡುತ್ತಾರೆ. ಇನ್ನೊಬ್ಬರು ಬರುತ್ತಾರಲ್ವಾ, ಅವರಿಗೂ ಹೀಗೇ ಮಾಡಲು ಗೊತ್ತಿರಲ್ವ’ ಎಂದು ಪ್ರಶ್ನಿಸಿದರು.
‘ಬಿಜೆಪಿಯು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಐಟಿ, ಇಡಿಯಂಥ ಸಂಸ್ಥೆಗಳು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಂದಿದ್ದಾ? ಅವರು ಅಧಿಕಾರದಲ್ಲಿರುವಾಗ ಎಷ್ಟು ಬಿಜೆಪಿ ನಾಯಕರನ್ನು ಬಂಧಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಅವು ಪವಿತ್ರ ತನಿಖಾ ಸಂಸ್ಥೆಗಳು, ಇಲ್ಲದಿದ್ದಾಗ ಅಪವಿತ್ರವಾಗಲು ಹೇಗೆ ಸಾಧ್ಯ’ ಎಂದರು.
‘ಈ ಬಾರಿ ಕಾಂಗ್ರೆಸ್ ಸರ್ಕಾರ ಗಣೇಶ ಮೂರ್ತಿ ಮೆರವಣಿಗೆಗಳಿಗೆ ತಡೆಯೊಡ್ಡಿ, ಬೇರೆ ದೇಶದಲ್ಲಿ ಹಬ್ಬ ಆಚರಿಸುವ ಭಾವನೆ ಬರುವಂತೆ ಮಾಡಿದೆ. ಅಧಿಕಾರಿಗಳನ್ನು ಬಳಸಿಕೊಂಡು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ವಿಮರ್ಶೆ ಮಾಡಿಕೊಳ್ಳಲಿ. ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿರುವುದು ಖಂಡನೀಯ. ಓಲೈಕೆ ರಾಜಕಾರಣ ಕಾಂಗ್ರೆಸ್ ರಕ್ತದಲ್ಲೇ ಇದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.