ADVERTISEMENT

ನನ್ನ ಮೇಲೆಯೇ ಸಿಎಂ ಸಿದ್ದರಾಮಯ್ಯ ದಾಳಿ ಮಾಡುತ್ತಿರುವುದೇಕೆ? : ಪ್ರತಾಪಸಿಂಹ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 14:09 IST
Last Updated 26 ಡಿಸೆಂಬರ್ 2023, 14:09 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ರಾಜ್ಯದಲ್ಲಿ 28 ಸಂಸದರಿದ್ದರೂ ಮೈಸೂರು ಸಂಸದರನ್ನೇಕೆ ಎಲ್ಲರೂ ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ನಾನು ಸೋಮಾರಿ ಸಿದ್ದನ ತರಹ ಕೆಲಸ ಮಾಡದೇ ಕೂರಬೇಕಿತ್ತೆ? ಜಾತಿ ಜಾತಿ ನಡುವೆ ಜನರನ್ನು ಎತ್ತಿಕಟ್ಟುತ್ತಿರಬೇಕಿತ್ತೇ’ ಎಂದು ಸಂಸದ ಪ್ರತಾಪ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.

ಹುಣಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲಾಗದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೊತ್ತು. ತವರು ಕ್ಷೇತ್ರದಲ್ಲಿ ಸೋತರೆ ಅವರ ಕುರ್ಚಿ ಅಲ್ಲಾಡಲಿದೆ. ಹೀಗಾಗಿಯೇ ದಾಳಿ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಜನರ ಮನೆಮಗನಾಗಿ ಕೆಲಸ ಮಾಡಿದ್ದನ್ನು ಸಹಿಸಲಾಗದೇ ನಿರ್ದಿಷ್ಟ ದಾಳಿ ನಡೆಸಿದ್ದಾರೆ. ಭಯೋತ್ಪಾದಕ ಎಂಬಂತೆ ಬಿಂಬಿಸುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡಿದ್ದಾರೆ’ ಎಂದರು.

ADVERTISEMENT

‘ನನ್ನ ಸಹೋದರ ಮರಗಳ್ಳನೆಂದು ಕಾಂಗ್ರೆಸ್‌ ‍‍ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕುತ್ತಾರೆ. ಎಫ್‌ಐಆರ್‌ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. 15 ವರ್ಷದಿಂದ ಶುಂಠಿ ಬೆಳೆದು ಜೀವನ ನಡೆಸುತ್ತಿದ್ದಾನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಿಮಗೆ ತಾಕತ್ತು, ದಮ್ಮಿದ್ದರೆ ಅಭಿವೃದ್ಧಿ ವಿಚಾರಗಳನ್ನಿಟ್ಟುಕೊಂಡು ಹೋರಾಟ ಮಾಡಿ. 40 ವರ್ಷದಲ್ಲಿ ನೀವೇನು ಕಡಿದು ಕಟ್ಟೆ ಹಾಕಿದ್ದೀರಿ ಎಂಬುದನ್ನಿಟ್ಟುಕೊಂಡು ಜನರ ಮುಂದೆ ಹೋಗಿ. ಆದರೆ, ವೈಯಕ್ತಿಕ ದಾಳಿಯೇಕೆ ಮಾಡುತ್ತೀರಿ’ ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.