ADVERTISEMENT

ಲೋಕಸಭೆ ಚುನಾವಣೆ ಫಲಿತಾಂಶ: ಅರಸು ಕುಡಿಗೆ ‌ಒಲಿದ ಮೈಸೂರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 14:11 IST
Last Updated 4 ಜೂನ್ 2024, 14:11 IST
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್   

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಪ್ರಥಮ ಪ್ರಯತ್ನದಲ್ಲೇ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌ನ ‘ಸಾಮಾನ್ಯ ಕಾ‌ಯಕರ್ತ’ ಎಂ.ಲಕ್ಷ್ಮಣ ಅವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತವರಿನಲ್ಲೇ ತೀವ್ರ ಮುಖಭಂಗವಾಗಿದೆ. ‘ಒಕ್ಕಲಿಗಾಸ್ತ್ರ’ವೂ ಕೈಹಿಡಿದಿಲ್ಲ.

ಸತತ ಎರಡು ಬಾರಿ ಆಯ್ಕೆಯಾಗಿದ್ದ ಪ್ರತಾಪ ಸಿಂಹ ಅವರ ಬದಲು, ಹೊಸ ಮುಖಕ್ಕೆ ಮಣೆ ಹಾಕಿದ್ದ ಬಿಜೆಪಿ ‘ಪ್ರಯೋಗ’ ಯಶಸ್ವಿಯಾಗಿದೆ. ‘ರಾಜಕಾರಣಕ್ಕೂ ನನಗೂ ಆಗಿ ಬರುವುದಿಲ್ಲ’ ಎನ್ನುತ್ತಲೇ ಕೊನೆ ಕ್ಷಣದಲ್ಲಿ ಬಿಜೆಪಿಗೆ ಸೇರಿ ಸ್ಪರ್ಧಿಸಿದ್ದ ‘ಅರಸು ಕುಡಿ’,  ಯದುವೀರ್‌ ಅವರಿಗೆ ಮತದಾರರು ‘ಬಹುಪರಾಕ್‌’ ಹೇಳಿದ್ದಾರೆ. ಇದರೊಂದಿಗೆ, ಬಿಜೆಪಿ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಿ ಬೀಗಿದೆ.

ADVERTISEMENT

ಯದುವೀರ್‌ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಾಲ್ಕು ಬಾರಿ ಸಂಸದರಾಗಿದ್ದರು. ಎರಡು ಬಾರಿ ಸೋತಿದ್ದರು. ಬಳಿಕ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದರು. ಈಗ ಯದುವೀರ್  ಗೆಲುವಿನೊಂದಿಗೆ ‘ರಾಜಪರಿವಾರ’ದ ರಾಜಕಾರಣ ಮತ್ತೆ ಪ್ರಾರಂಭವಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.