ಮೈಸೂರು: ‘ಮನಸ್ಸು ಮತ್ತು ಶರೀರದ ಮೇಲೆ ಏಕತೆ ಸಾಧಿಸುವುದು, ಆತ್ಮ ಹಾಗೂ ಭಗವಂತನ ನಡುವೆ ಸಂಬಂಧವನ್ನು ಬೆಸೆಯುವುದೇ ಯೋಗ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಅಮೆರಿಕದ ಮೇರಿಲ್ಯಾಂಡ್ನ ಗೇಥರ್ಸ್ಬರ್ಗ್ಲ್ಲಿರುವ ಜೆಎಸ್ಎಸ್ ಅಧ್ಯಾತ್ಮ ಮಿಷನ್ನಲ್ಲಿ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತವು ಜಗತ್ತಿಗೆ ಅಧ್ಯಾತ್ಮ, ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನ ಹೀಗೆ... ಅನೇಕ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದೆ. ಅವುಗಳಲ್ಲಿ ಯೋಗವು ಅತ್ಯಂತ ಮಹತ್ವದ್ದು. ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ ಇದಾಗಿದೆ’ ಎಂದರು.
‘ನಿಯಮಿತ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ಶರೀರಗಳಿಗೆ ನವಚೈತನ್ಯ ದೊರಕುತ್ತದೆ. ಒತ್ತಡ ಮುಕ್ತ ಜೀವನಕ್ಕೂ ಇದು ಸಹಕಾರಿಯಾಗಿದೆ’ ಎಂದು ತಿಳಿಸಿದರು.
ಆಧ್ಯಾತ್ಮಿಕ ಕೇಂದ್ರದ ಯೋಗ ಶಿಕ್ಷಕ ಸಂಜಾತ್ ಸೂಲಕುಂಟೆ ಮಾರ್ಗದರ್ಶನದಲ್ಲಿ ಜೆಎಸ್ಎಸ್ ಸಂಡೆ ಸ್ಕೂಲ್ ವಿದ್ಯಾರ್ಥಿಗಳು, ಸ್ವಯಂಸೇವಕರು, ಸುತ್ತಮುತ್ತಲಿನ ಅನಿವಾಸಿ ಭಾರತೀಯರು ಹಾಗೂ ಮಿಷನ್ನ ಸಿಬ್ಬಂದಿ ಯೋಗಾಸನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.