ADVERTISEMENT

ಮೈಸೂರು | ಯುವ ದಸರಾ ಉತ್ತನಹಳ್ಳಿಗೆ ಸ್ಥಳಾಂತರ: ಸಾರ್ವಜನಿಕರ ಆಕ್ಷೇಪ

ಆರ್.ಜಿತೇಂದ್ರ
Published 24 ಸೆಪ್ಟೆಂಬರ್ 2024, 7:15 IST
Last Updated 24 ಸೆಪ್ಟೆಂಬರ್ 2024, 7:15 IST
ಮಹಾರಾಜ ಕಾಲೇಜು ಮೈದಾನದಲ್ಲಿ ಕಳೆದ ವರ್ಷ ನಡೆದ ಯುವ ದಸರಾದಲ್ಲಿ ಪಾಲ್ಗೊಂಡ ಯುವಜನರು– ಸಂಗ್ರಹ ಚಿತ್ರ
ಮಹಾರಾಜ ಕಾಲೇಜು ಮೈದಾನದಲ್ಲಿ ಕಳೆದ ವರ್ಷ ನಡೆದ ಯುವ ದಸರಾದಲ್ಲಿ ಪಾಲ್ಗೊಂಡ ಯುವಜನರು– ಸಂಗ್ರಹ ಚಿತ್ರ   

ಮೈಸೂರು: ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾ ಕಾರ್ಯಕ್ರಮದ ಸ್ಥಳವು ಮಹಾರಾಜ ಕಾಲೇಜು ಮೈದಾನದಿಂದ ಉತ್ತನಹಳ್ಳಿ ಮೈದಾನಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಸಂಚಾರ ದಟ್ಟಣೆ ತಗ್ಗಿಸುವ ಸಲುವಾಗಿ ನಗರದ ಹೊರವಲಯದಲ್ಲಿ ಕಾರ್ಯಕ್ರಮ ಆಯೋಜಿಸುವ ಜಿಲ್ಲಾಡಳಿತದ ನಿರ್ಧಾರಕ್ಕೆ ಸಾರ್ವಜನಿಕರಿಂದ ಆಕ್ಷೇಪವೂ ವ್ಯಕ್ತವಾಗಿದೆ.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರತಿ ವರ್ಷ ಯುವ ದಸರಾ ಕಾರ್ಯಕ್ರಮಗಳು ನಡೆಯುತ್ತ ಬಂದಿದ್ದವು. ಸಾವಿರಾರು ಸಂಖ್ಯೆಯಲ್ಲಿ ಯುವಜನರು ಸೇರಿ ಸಂಭ್ರಮಿಸುತ್ತಿದ್ದರು. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮಕ್ಕೆ ಬರುವವರ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ. ಈ ಬಾರಿ ಕಾರ್ಯಕ್ರಮಗಳನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿಸಬೇಕು ಎನ್ನುವ ಕಾರಣಕ್ಕೆ ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಮುಂದಾಗಿದ್ದರು. ಹಲವು ಸ್ಥಳಗಳ ಪರಿಶೀಲನೆ ಬಳಿಕ ಲಲಿತಾದ್ರಿಪುರ–ಉತ್ತನಹಳ್ಳಿ ನಡುವಿನ ಖಾಲಿ ಜಮೀನನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಸುಮಾರು ನೂರು ಎಕರೆಯಷ್ಟು ಕೃಷಿ ಭೂಮಿಯನ್ನು ಈ ಕಾರ್ಯಕ್ರಮಕ್ಕಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಹಿಂದಿನ ಬಾರಿಗಿಂತ ಬೃಹತ್ ಆದ ವೇದಿಕೆ ನಿರ್ಮಾಣ ಆಗಲಿದ್ದು, ಸುಮಾರು 150 ಅಡಿ ವಿಸ್ತೀರ್ಣದ ಬೃಹತ್ ವೇದಿಕೆ ತಲೆ ಎತ್ತಲಿದೆ. 1 ಲಕ್ಷ ಮಂದಿಗೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ADVERTISEMENT

ವಿಐಪಿಗಳು, ಜನಸಾಮಾನ್ಯರಿಗಾಗಿ ಪ್ರತ್ಯೇಕ ಆಸನಗಳ ವ್ಯವಸ್ಥೆ ಇರಲಿದೆ. ಕುಡಿಯುವ ನೀರು, ಮೊಬೈಲ್‌ ಶೌಚಾಲಯಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ನಗರ ಬಸ್ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯವೂ ಇರಲಿದೆ. ಪಾರ್ಕಿಂಗ್ ವ್ಯವಸ್ಥೆ, ಅಲ್ಲಲ್ಲಿ ಸೈನ್‌ಬೋರ್ಡ್‌ಗಳ ವ್ಯವಸ್ಥೆಯನ್ನೂ ಕಲ್ಪಿಸುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಖ್ಯಾತನಾಮರಿಂದ ಕಾರ್ಯಕ್ರಮ: ಸಿನಿಮಾ ಹಾಗೂ ಸಂಗೀತ ಲೋಕದ ದಿಗ್ಗಜರು ಈ ಬಾರಿಯ ಯುವ ದಸರಾದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕರಾದ ಇಳಯರಾಜ, ಎ.ಆರ್. ರೆಹಮಾನ್‌, ಗಾಯಕಿ ಶ್ರೇಯಾ ಘೋಷಲ್‌, ‘ಕೆಜಿಎಫ್‌’ ಖ್ಯಾತಿಯ ರವಿ ಬಸರೂರ್ ಸೇರಿದಂತೆ ಅನೇಕ ಕಲಾವಿದರು ಕಾರ್ಯಕ್ರಮ ಪ್ರಸ್ತುತಪಡಿಸುವ ನಿರೀಕ್ಷೆ ಇದೆ. ಕಲಾವಿದರ ಪಟ್ಟಿ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.

100 ಎಕರೆಯಷ್ಟು ಕೃಷಿ ಜಮೀನಿನಲ್ಲಿ ಕಾರ್ಯಕ್ರಮ 1 ಲಕ್ಷ ಆಸನಗಳ ವ್ಯವಸ್ಥೆ ಮೊಬೈಲ್‌ ಶೌಚಾಲಯ, ನೀರು, ಪಾರ್ಕಿಂಗ್ ವ್ಯವಸ್ಥೆ
ಓಡಾಟಕ್ಕೆ ತೊಂದರೆ
ಆಹಾರ ಮೇಳ– ಯುವ ದಸರಾದಂತಹ ಕಾರ್ಯಕ್ರಮಗಳು ಅಕ್ಕಪಕ್ಕದಲ್ಲೇ ನಡೆಯುತ್ತಿದ್ದು ಸಾವಿರಾರು ಮಂದಿ ಎರಡೂ ಕಡೆ ಭೇಟಿ ಕೊಟ್ಟು ಕಾರ್ಯಕ್ರಮದೊಟ್ಟಿಗೆ ಖಾದ್ಯಗಳನ್ನೂ ಸವಿಯುತ್ತಿದ್ದರು. ಆದರೆ ಈ ಬಾರಿ ಅದಕ್ಕೆ ಅವಕಾಶ ಇಲ್ಲದಂತೆ ಆಗಿದೆ. ನಗರದ ಹೊರವಲಯದ ಒಂದು ಮೂಲೆಯಲ್ಲಿ ಕಾರ್ಯಕ್ರಮ ನಡೆದರೆ ಓಡಾಟಕ್ಕೆ ತೊಂದರೆ ಆಗಲಿದೆ ಎನ್ನುವುದು ಜನರ ದೂರು. ನಗರದ ಹೃದಯ ಭಾಗದಲ್ಲಿ ಕಾರ್ಯಕ್ರಮ ನಡೆದರೆ ಅನುಕೂಲ ಹೆಚ್ಚು. ಬರುವವರಿಗೆ ಬೇಕಾದ ಊಟೋಪಚಾರ ಸೇರಿದಂತೆ ಸಕಲೆಂಟು ಸೌಲಭ್ಯಗಳು ಸಿಗುತ್ತವೆ. ಆದರೆ ಕಾರ್ಯಕ್ರಮ ವೀಕ್ಷಣೆಗೆ ಹೊರವಲಯಕ್ಕೆ ಹೋಗುವುದು ಕಷ್ಟ. ವೀಕ್ಷಕರಿಗೆ ಬೇಕಾದ ಮೂಲ ಸೌಕರ್ಯಗಳೂ ಇರುವುದಿಲ್ಲ. ಅದರಲ್ಲೂ ಮಹಿಳೆಯರ ಓಡಾಟ ಹಾಗೂ ಸುರಕ್ಷತೆ ದೃಷ್ಟಿಯಿಂದ ಮಹಾರಾಜ ಕಾಲೇಜು ಮೈದಾನವೇ ಕಾರ್ಯಕ್ರಮಕ್ಕೆ ಉತ್ತಮ ಆಯ್ಕೆ ಎನ್ನುವ ಅಭಿ‍ಪ್ರಾಯ ವ್ಯಕ್ತವಾಗಿದೆ.
ಹೊರವರ್ತುಲ ರಸ್ತೆಗೆ ಸಮೀಪ
‘ಯುವ ದಸರೆಗೆ ಗುರುತಿಸಲಾದ ಹೊಸ ಸ್ಥಳವು ರಿಂಗ್‌ ರಸ್ತೆಗೆ ಸಮೀಪದಲ್ಲೇ ಇದ್ದು ಜನರ ಓಡಾಟಕ್ಕೆ ಅನುಕೂಲಕರವಾಗಿಯೇ ಇದೆ. ಯಾವುದೇ ತೊಂದರೆ ಆಗದಂತೆ ಸೌಲಭ್ಯಗಳನ್ನು ಒದಗಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು. ‘ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತ ಪ್ರತಿ ವರ್ಷ ದಸರೆ ಸಂದರ್ಭ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿತ್ತು. ಮೈದಾನವು ಚಿಕ್ಕದಾಗಿದ್ದರಿಂದ ಹೆಚ್ಚಿನ ಜನರಿಗೆ ಸ್ಥಳಾವಕಾಶವೂ ಸಿಗುತ್ತಿರಲಿಲ್ಲ. ಈ ಬಾರಿ 1 ಲಕ್ಷದಷ್ಟು ಜನರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸುವ ಯೋಜನೆ ಇದ್ದು ಆ ಕಾರಣಕ್ಕೆ ಉತ್ತನಹಳ್ಳಿ ಬಳಿ ಸ್ಥಳ ಆಯ್ಕೆ ಮಾಡಿದ್ದೇವೆ. ಮೈಸೂರಿನ ಯಾವುದೇ ಭಾಗದ ಜನರು ರಿಂಗ್‌ ರಸ್ತೆ ಮುಖಾಂತರ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದ್ದು ಪ್ರವಾಸಿಗರಿಗೂ ಅನುಕೂಲ ಆಗಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.