ರಾಯಚೂರು: ಮಟಮಾರಿ ರೈಲ್ವೆ ನಿಲ್ದಾಣದಿಂದ ಮಂತ್ರಾಲಯ ರಸ್ತೆ ರೈಲ್ವೆ ನಿಲ್ದಾಣದವರೆಗೆ ಜೋಡು ಹಳಿ ರೈಲ್ವೆ ಮಾರ್ಗ ನಿರ್ಮಾಣ ಹಾಗೂ ತುಂಗಭದ್ರಾ ರೈಲ್ವೆ ಸೇತುವೆ ವಿಸ್ತರಣೆ ಕಾಮಗಾರಿಗೆ ಡಿಸೆಂಬರ್ 14ರಂದು ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಟಮಾರಿ ರೈಲ್ವೆ ನಿಲ್ದಾಣದಲ್ಲಿ ಬೆಳಿಗ್ಗೆ 11.30ಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ರಾಯಚೂರು– ಗುಂತಕಲ್ ನಡುವಿನ 120 ಕೀ.ಮಿ ರೈಲು ಮಾರ್ಗ ಜೋಡು ಹಳಿ ಮಾರ್ಗ ನಿರ್ಮಾಣ ಯೋಜನೆಯಲ್ಲಿ 81 ಕೀ. ಮಿ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 70 ಕೀ.ಮಿ ಜೋಡು ಹಳಿ ರೈಲು ಮಾರ್ಗವನ್ನು ರೈಲ್ವೆ ವಿಕಾಸ ನಿಗಮವು ಕೈಗೊಂಡಿದೆ. ಇದರಲ್ಲಿ 28 ಕೀ.ಮಿ ಜೋಡು ಹಳಿ ರೈಲು ಮಾರ್ಗ 2014 ಜನವರಿಗೆ ಪೂರ್ಣಗೊಳ್ಳಲಿದೆ.
81.ಕೀ.ಮಿಯಲ್ಲಿ ಮಟಮಾರಿಯಿಂದ– ಮಂತ್ರಾಲಯ ರಸ್ತೆ ರೈಲ್ವೆ ನಿಲ್ದಾಣದವರೆಗೆ 11 ಕೀ.ಮಿ ಜೋಡು ಹಳಿ ರೈಲು ಮಾರ್ಗ ವಿಸ್ತರಣೆ ಕಾಮಗಾರಿಯನ್ನು ದಕ್ಷಿಣ ಮಧ್ಯೆ ರೈಲ್ವೆ ವಲಯ ಕೈಗೊಂಡಿದೆ. ₨19 ಕೋಟಿ ಮೊತ್ತದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. 1 ದೊಡ್ಡ ಹಾಗೂ 16 ಚಿಕ್ಕ ರೈಲ್ವೆ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ದಕ್ಷಿಣ ಮಧ್ಯೆ ರೈಲ್ವೆ ವಲಯ ತಿಳಿಸಿದೆ.
ರಾಯಚೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮಟಮಾರಿ ರೈಲ್ವೆ ನಿಲ್ದಾಣದಿಂದ ವಾರ್ಷಿಕ ₨ 16 ಲಕ್ಷ ಆದಾಯ ಸಂಗ್ರಹವಾಗುತ್ತದೆ. 4 ಎಕ್ಸ್ಪ್ರೆಸ್ ಹಾಗೂ 4 ಪ್ಯಾಸೇಂಜರ್ಸ್ ರೈಲು ಈ ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ಚೆನ್ನೈ, ಬೆಂಗಳೂರು, ಮುಂಬೈ, ನಾಂದೇಡ್, ಗುಲ್ಬರ್ಗ, ಸೊಲ್ಲಾಪುರಕ್ಕೆ ಈ ರೈಲು ಮಾರ್ಗ ಸಂಪರ್ಕ ಕೊಂಡಿಯಾಗಿದೆ.
ರೈಲು ಜೋಡು ಹಳಿ ಮಾರ್ಗ ನಿರ್ಮಾಣ ಕಾಮಗಾರಿ ಭಾಗವಾಗಿ ಮಟಮಾರಿ ರೈಲ್ವೆ ನಿಲ್ದಾಣ ಹೊಸ ಕಟ್ಟಡ, ಅತ್ಯಾಧುನಿಕ 550 ಮೀಟರ್ ಅಗಲದ ಫ್ಲಾಟ್ಫಾರ್ಮ್ ನಿರ್ಮಾಣ ಮಾಡಲಾಗುತ್ತಿದೆ. ಅದೇ ಹನುಮಾಪುರ ರೈಲ್ವೆ ಹಾಲ್ಟ್ ಸ್ಟೇಷನ್ನಲ್ಲಿ 400 ಮೀಟರ್ ಅಗಲದ ಫ್ಲಾಟ್ ಫಾರ್ಮ್ ನಿರ್ಮಾಣ ಮಾಡಲಾಗುತ್ತಿದೆ ಎಂದು ದಕ್ಷಿಣ ಮಧ್ಯೆ ರೈಲ್ವೆ ವಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.