ADVERTISEMENT

ಬಡ ಕುಟುಂಬಗಳಿಗೆ ಧರ್ಮಸ್ಥಳ ಸಂಸ್ಥೆಯಿಂದ ‘ವಾತ್ಸಲ್ಯ’ ಮನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 13:13 IST
Last Updated 22 ನವೆಂಬರ್ 2023, 13:13 IST
ಕವಿತಾಳದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಮೋಹನ್ ನಾಯಕ ಮಾತನಾಡಿದರು.
ಕವಿತಾಳದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಮೋಹನ್ ನಾಯಕ ಮಾತನಾಡಿದರು.   

ಕವಿತಾಳ: ‘ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಿರ್ಗತಿಕರಿಗೆ ಮಾಸಾಶನ ನೀಡುವುದು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುತ್ತಿದೆ’ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಮೋಹನ್ ನಾಯಕ ಹೇಳಿದರು.

ಸಂಸ್ಥೆಯ ವಾತ್ಸಲ್ಯ ಯೋಜನೆಯಡಿ ಇಲ್ಲಿನ ಖಾಜಾ ಬೀ ಕುಟುಂಬಕ್ಕೆ ಮಂಜೂರಾದ ಮನೆ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ‘ರಾಜ್ಯದಲ್ಲಿ ಸಮುದಾಯ ಅಭಿವೃದ್ದಿ ಯೋಜನೆಯಡಿ ಅಂದಾಜು 20 ಸಾವಿರ ಫಲಾನುಭವಿಗಳಿಗೆ ಪ್ರತಿ ತಿಂಗಳು ₹750 ರಿಂದ ₹1 ಸಾವಿರದ ವರೆಗೆ ಸಂಸ್ಥೆ ಮಾಸಾಶನ ನೀಡುತ್ತಿದೆ ಎಂದರು.

ಸಿರವಾರ ತಾಲ್ಲೂಕಿನಲ್ಲಿ 38 ಜನರಿಗೆ ಮಾಸಾಶನ ನೀಡಲಾಗುತ್ತಿದೆ,. ವಾತ್ಸಲ್ಯ ಯೋಜನೆಯಡಿ ಪಟ್ಟಣದ ಮೂರು ಕುಟುಂಬಗಳಿಗೆ ₹ 1 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸರ್ವಾಂಗೀಣ ಅಭಿವೃದ್ದಿಗೆ ಸ್ವಸಹಾಯ ಗುಂಪುಗಳ ಮೂಲಕ ಸಂಸ್ಥೆ ಶ್ರಮಿಸುತ್ತಿದೆ’ ಎಂದರು.

ADVERTISEMENT

ಪಟ್ಟಣ ಪಂಚಾಯಿತಿ ಸದಸ್ಯ ಎಂ.ರಾಘವೇಂದ್ರ ಮಾತನಾಡಿ ‘ಸರ್ಕಾರದ ಅನೇಕ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ, ಹೀಗಾಗಿ ವಸತಿ ರಹಿತ ಬಡ ಕುಟುಂಬಗಳು ಇವೆ. ನೈಜ ಫಲಾನುಭವಿಗಳನ್ನು ಗುರುತಿಸಿ ಸಂಸ್ಥೆ ವತಿಯಿಂದ ಮನೆ ನಿರ್ಮಿಸಿ ಕೊಡುತ್ತಿರುವುದು ಶ್ಲಾಘನೀಯ’ ಎಂದರು.

ಮುಖಂಡ ಶಿವಣ್ಣ ವಕೀಲ ಮಾತನಾಡಿದರು. ಅರ್ಚಕ ಸಿದ್ದಯ್ಯಸ್ವಾಮಿ ಅಳವಳ್ಳಿಮಠ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಾಳಪ್ಪ, ಮಹ್ಮದ್ ಖಲೀಂ, ಅಕ್ಬರ್ ಸಾಬ್ ಮತ್ತು ಕ್ರೈಂ ಸಬ್ ಇನ್ ಸ್ಪೆಕ್ಟರ್ ಪಂಪಣ್ಣ ಮತ್ತಿತರರು ಉಪಸ್ಥಿತರಿದ್ದರು.

ಕವಿತಾಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರ್ಗತಿಕರಿಗೆ ನೀಡಿದ ಮನೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾಳಪ್ಪ ಭೂಮಿ ಪೂಜೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.