ಲಿಂಗಸುಗೂರು: ರಾಯಚೂರು ಜಿಲ್ಲೆ ಸಿಂಧನೂರಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯದ ಕಲಾಪಗಳನ್ನು ವಾರದಲ್ಲಿ ಎರಡು ದಿನ (ಶುಕ್ರವಾರ, ಶನಿವಾರ) ಲಿಂಗಸುಗೂರಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್ ಭರತ್ ಅವರು ಆದೇಶ ಹೊರಡಿಸಿದ್ದಾರೆ.
ಎರಡನೇ ಶನಿವಾರ ಬಂದಾಗ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಲಾಪಗಳನ್ನು ಲಿಂಗಸುಗೂರಲ್ಲಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಮಂಜೂರಾತಿಗೆ ವಕೀಲರ ಸಂಘದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ವಕೀಲರ ಸಂಘದ ಅಧ್ಯಕ್ಷ ಆಶಿಕ್ಅಹ್ಮದ ನೇತೃತ್ವದ ತಂಡ ಸುಪ್ರೀಂಕೋರ್ಟ್ ವಿಶ್ರಾಂತ ನಾಯಮೂರ್ತಿ ಶಿವರಾಜ ಪಾಟೀಲ, ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಪ್ರಸನ್ನ ಬಿ. ವರಲೆ, ರಾಯಚೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ರವಿ.ಎಸ್. ಹೊಸಮನಿ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಕಾರ್ಯದರ್ಶಿ ಕೆ.ಟಿ ನಾಯ್ಕ ಸೇರಿದಂತೆ ಇತರರನ್ನು ಉದ್ಘಾಟನೆಗೆ ಆಹ್ವಾನಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಆಶಿಕ್ಅಹ್ಮದ ಮಾತನಾಡಿ, ‘ಸಿಂಧನೂರು ಮತ್ತು ಲಿಂಗಸುಗೂರು ಹೋಲಿಕೆ ಮಾಡಿದಾಗ ನಮ್ಮ ಕೋರ್ಟ್ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ವಾರದಲ್ಲಿ ಎರಡು ದಿನಗಳ ಕಲಾಪ ಸ್ಥಳೀಯವಾಗಿ ನಡೆಸಲು ಹೈಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಕಕ್ಷಕಿದಾರರಿಗೂ ಹಾಗೂ ವಕೀಲರಿಗೂ ಅನುಕೂಲ ಆಗಿದೆ’ ಎಂದು ಹರ್ಷ ಹಂಚಿಕೊಂಡರು.
ಶರಣಬಸವ ಪಟ್ಟಣಶೆಟ್ಟಿ, ಮಹಾಲಿಂಗಪ್ಪ ಭೂಪುರ, ನಾಗರಾಜ ಗಸ್ತಿ, ಮುದಕಪ್ಪ ನೀರಲಕೇರಿ, ಕುಪ್ಪಣ್ಣ ಕೋಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.