ಮಾನ್ವಿ: ‘ಆಧುನಿಕತೆ, ಅಭಿವೃದ್ಧಿಯ ಹೆಸರಿನಲ್ಲಿ ಉಂಟಾಗಿರುವ ಪರಿಸ್ಥಿತಿ ಹಾಗೂ ಪರಿಣಾಮಗಳ ಬಗ್ಗೆ ಸಮರ್ಪಕ ಚಿಂತನೆ ಅಗತ್ಯ’ ಎಂದು ವಿಮರ್ಶಕ ರಂಗನಾಥ ಕಂಟನಕುಂಟೆ ಹೇಳಿದರು.
ಭಾನುವಾರ ಪಟ್ಟಣದ ಎಸ್ಆರ್ಎಸ್ವಿಎಸ್ ಕಾಲೇಜಿನ ಸಭಾಂಗಣದಲ್ಲಿ ಬೊಮ್ಮನ್ಹಾಳ ಬಾಲನಗೌಡ ಸ್ಮಾರಕ ಪ್ರಾರ್ಥನಾ ದತ್ತಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತೃತೀಯ ವರ್ಷದ ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
'ಆಧುನಿಕತೆಯಿಂದ ಕುಲಕಸಬುಗಳು ನಾಶವಾಗಿ ಅನೇಕ ಸಮುದಾಯಗಳು ಬದುಕು ಅತಂತ್ರವಾಗಿದೆ. ಬಡವರ ಆದಾಯ ಹೆಚ್ಚಿಸುವುದು ಅಭಿವೃದ್ಧಿಯೊ ಅಥವಾ ಸೇತುವೆ, ಕಟ್ಟಡಗಳ ನಿರ್ಮಾಣ ಅಭಿವೃದ್ಧಿಯೋ ಎನ್ನುವುದು ಸೇರಿದಂತೆ ಇನ್ನೊಂದು ಮುಖದ ಚರ್ಚೆ ಈಗಿನ ಅಗತ್ಯವಾಗಿದೆ’ ಎಂದರು.
ಶಾಸಕ ಜಿ. ಹಂಪಯ್ಯ ನಾಯಕ ಮಾತನಾಡಿದರು. ‘ಗಾಳಿಯ ಎದೆಸೀಳಿ ಹೊರಟ ಹಕ್ಕಿ’ ಕವನ ಸಂಕಲನದ ಕರ್ತೃ ತುಮಕೂರಿನ ಕವಿ ಎಸ್.ಕೆ. ಮಂಜುನಾಥ ಹಾಗೂ ‘ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್’ ಎಂಬ ಕಥಾ ಸಂಕಲನದ ಕತೆಗಾರ ಮುನವ್ವರ್ ಜೋಗಿಬೆಟ್ಟು ಅನುಪಸ್ಥಿತಿಯಲ್ಲಿ ಅವರ ಪರವಾಗಿ ಕವಿ ವಿಲ್ಸನ್ ಕಟೀಲ ಅವರಿಗೆ ಪ್ರಾರ್ಥನಾ ಸಾಹಿತ್ಯ ಪುರಸ್ಕಾರದ ತಲಾ ₹10 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಪ್ರಾರ್ಥನಾ ದತ್ತಿ ಸಂಸ್ಥೆಯ ಅಧ್ಯಕ್ಷ ಡಾ.ಯಂಕನಗೌಡ ಪಾಟೀಲ ಬೊಮ್ಮನ್ಹಾಳ ಅಧ್ಯಕ್ಷತೆವಹಿಸಿದ್ದರು.
ಸಾಹಿತಿ ಟಿ.ಎಸ್. ಗೊರವರ, ನಿವೃತ್ತ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ, ಇತರ ಪದಾಧಿಕಾರಿಗಳಾದ ಆರ್. ಸತ್ಯನಾರಾಯಣ ಮುಷ್ಟೂರು, ಈರಣ್ಣ ಮರ್ಲಟ್ಟಿ, ಶರಣಕುಮಾರ ಮುದ್ದನಗುಡ್ಡಿ, ದುರುಗಪ್ಪ ತಡಕಲ್, ದೇವೇಂದ್ರ ಹೂಗಾರ, ಹನುಮೇಶ ಕವಿತಾಳ, ಸಂಜೀವಕುಮಾರ, ಶಿವರಾಜಗೌಡ, ನಾಗನಗೌಡ ಬೊಮ್ಮನ್ಹಾಳ, ಲಕ್ಷ್ಮಿಕಾಂತ ಪಾಟೀಲ, ಎಸ್. ಎಂ.ಪಾಟೀಲ ಉದ್ಬಾಳ, ಶಿವರಾಜ ಕೊಪ್ಪರ, ಡಾ.ಬಸವರಾಜ ಸುಂಕೇಶ್ವರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.