ಮುದಗಲ್: ಹೋಬಳಿಯಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಮುಂದಾಗಿದ್ದು ಭೂ ಹದ ಮಾಡುವಲ್ಲಿ ನಿರತರಾಗಿದ್ದಾರೆ.
ಪಟ್ಟಣ ಸೇರಿದಂತೆ ಸುತ್ತಮುತ್ತಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದ ರೈತರು ನಿಟ್ಟುಸಿರು ಬಿಟ್ಟಂತಾಗಿದೆ.
ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಜಮೀನುಗಳಲ್ಲಿ ಮಹಿಳೆಯರು ಕಸ–ಕಡ್ಡಿ ಸ್ವಚ್ಚಗೊಳಿಸುವುದು, ಕೊಟ್ಟಿಗೆ ಗೊಬ್ಬರ ಹಾಕುವುದು ಹಾಗೂ ಎತ್ತುಗಳ ಮೂಲಕ ರಂಟೆ, ಕುಂಟೆಯ ಉಳುಮೆ ಮಾಡಿ ಜಮೀನನ್ನು ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಕಳೆದ ವರ್ಷ ತೋಗರಿಗೆ ಉತ್ತಮ ಬೆಲೆ ಸಿಕ್ಕಿದ್ದರಿಂದ ರೈತರು ತೋಗರಿ ಬೇಸಾಯದತ್ತ ಹೆಚ್ಚಿನ ಒಲವು ಹರಿಸಿದ್ದಾರೆ. ತೊಗರಿ ಜತೆಗೆ ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ, ಹೆಸರು ಸೇರಿದಂತೆ ಇನ್ನಿತರ ಬೆಳೆ ಬೆಳೆಯಲು ಸಜ್ಜಾಗಿದ್ದಾರೆ.
ಈ ಬಾರಿ ಮಳೆ ಪ್ರಾರಂಭವಾಗಿರುವುದನ್ನು ನೋಡಿದರೆ ಮುಂಗಾರು ಮಳೆ ಆಶಾದಾಯಕವಾಗಿ ಅನ್ನಿಸುತ್ತಿದೆ. ಕಳೆದ ಬಾರಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಸಾಕಷ್ಟು ರೈತರಿಗೆ ನಷ್ಟವಾಯಿತು. ಸರ್ಕಾರ ರೈತರ ನೆರವಿಗೆ ಬಂದು ರೈತರ ಸಾಲದ ಅಸಲು ಮತ್ತು ಬಡ್ಡಿಯನ್ನು ಮನ್ನಾ ಮಾಡಬೇಕೆಂದು ರೈತರ ಒತ್ತಾಯಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.