ಸಿಂಧನೂರು: ಭೋವಿ ಸಮಾಜದ ಯುವತಿ ಅನುರಾಧ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ತನಿಖೆ ನಡೆಸಬೇಕು. ಆತ್ಮಹತ್ಯೆಗೆ ಕಾರಣವಾದ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಭೋವಿ (ವಡ್ಡರ) ಸಂಘದ ತಾಲ್ಲೂಕು ಘಟಕದಿಂದ ಗುರುವಾರ ನಗರದ ಪ್ರವಾಸಿ ಮಂದಿರದಿಂದ ಮಹಾತ್ಮ ಗಾಂಧಿ ವೃತ್ತದ ಮೂಲಕ ಮಿನಿವಿಧಾನಸೌಧ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ರಾಯಚೂರು ನಗರದ ಯುವತಿ ಅನುರಾಧ ಅವರನ್ನು ವಿಜಯರೆಡ್ಡಿ ಎಂಬ ಯುವಕ ಪ್ರೀತಿಸಿ, ಮದುವೆ ಆಗುವುದಾಗಿ ಒಪ್ಪಿಸಿ, ಲೈಂಗಿಕವಾಗಿ ಬಳಸಿಕೊಂಡ ನಂತರ ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಮನನೊಂದು ಅನುರಾಧ ಮಹಿಳಾ ಸಾಂತ್ವನ ಕೇಂದ್ರದ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮತ್ತು ಸಾಂತ್ವನ ಕೇಂದ್ರದ ಅಧಿಕಾರಿಗಳ ಬೇಜವಾಬ್ದಾರಿಯೂ ಕಾರಣವಾಗಿದೆ. ಆದ್ದರಿಂದ ಇವರನ್ನು ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಅನುರಾಧ ಸಾವಿಗೆ ನ್ಯಾಯ ಒದಗಿಸಬೇಕೆಂದು ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ ಭೋವಿ ಆಗ್ರಹಿಸಿದರು.
ನಂತರ ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮುಖಂಡರಾದ ಬಂಡಿ ಮರಿಯಪ್ಪ, ಯಂಕೋಬ ಸಾಸಲಮರಿ, ಶಂಕರ ಬ್ಯಾಡಗಿ, ಗದ್ದೆಮ್ಮ, ಶ್ಯಾಮಣ್ಣ ಕುರುಕುಂದಾ, ದುರುಗಪ್ಪ ಕುರುಕುಂದಾ, ಹನುಮೇಶ ತಿಡಿಗೋಳ, ಪ್ರಕಾಶ ಮಲ್ಲದಗುಡ್ಡ, ಶೇಖರಪ್ಪ, ರವಿ ಗಿಜ್ಜಳ್ಳಿ, ಅಂಬಣ್ಣ ಗುಂಜಳ್ಳಿ, ಆನಂದ ಆಯನೂರು, ಪಂಪಾಪತಿ, ಯಂಕಪ್ಪ ಹುಡಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.