ಕವಿತಾಳ: ಸಮೀಪದ ಇರಕಲ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮೇಲ್ದರ್ಜೇಗೆ ಏರಿಸುವಂತೆ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆ ಒತ್ತಾಯಿಸಿದೆ.
ಈ ಕುರಿತು ಮಾನ್ವಿ ಕ್ಷೇತ್ರ ಶಿಕ್ಷಣಾಧಿಕಾರಿ ಜೀವನ್ ಸಾಬ ಅವರಿಗೆ ಈಚೆಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸದ್ಯ 5ನೇ ತರಗತಿಯ ವರೆಗೆ ಮಾತ್ರ ಕಲಿಯಲು ಅವಕಾಶವಿದ್ದು, 6ನೇ ತರಗತಿಗೆ ಬೇರೆ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಬಸ್ ಸೌಲಭ್ಯವಿಲ್ಲದ ಕಾರಣ ಅಂದಾಜು 8 ಕಿ.ಮೀ ದೂರದ ತೋರಣದಿನ್ನಿ, ಹಾಲಾಪುರ ಗ್ರಾಮಗಳಿಗೆ ನಡೆದು ಹೋಗಬೇಕಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಾರೆ. ಅದರಲ್ಲೂ ಬಾಲಕಿಯರಿಗೆ ನಡೆದು ಹೋಗಲು ಪಾಲಕರು ಅವಕಾಶ ನೀಡದ ಕಾರಣ ಶಿಕ್ಷಣ ಮೊಟಕುಗೊಳಿಸುವಂತಾಗಿದೆ. ಈ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೇಗೇರಿಸಿ 7ನೇ ತರಗತಿ ವರೆಗೆ ಶಿಕ್ಷಣ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಸಂಘಟನೆ ಅಧ್ಯಕ್ಷ ಮೌನೇಶ ತುಗ್ಗಲದಿನ್ನಿ, ಹುಸೇನಪ್ಪ, ಗುರು ಮಾನ್ವಿ, ಅಮರೇಶ ಬ್ಯಾಗವಾಟ್, ಮೌನೇಶ ನಕ್ಕುಂದಿ, ಲಿಂಗರಾಜು ಬ್ಯಾಗವಾಟ್, ಓಂಕಾರ ಚಿಕ್ಕ ಕೊಟ್ನೇಕಲ್, ರಾಜು ಚಾಗಭಾವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.