ರಾಯಚೂರು: ‘ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿ ಸಮತಾ ಸಮಾಜ ನಿರ್ಮಾಣದ ಪ್ರತಿಪಾದನೆ ಮಾಡಿದ್ದಾರೆ’ ಎಂದು ಸಾಹಿತಿ ಅಕ್ಕಮಹಾದೇವಿ ಉಪ್ಪಿನ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
‘ಬಸವಣ್ಣನವರು ಲಿಂಗ ಆಧಾರಿತ ತಾರತಮ್ಯ ನಿವಾರಿಸಲು ಹೋರಾಡಿದ್ದರು. ಸಾಮಾಜಿಕ ತಾರತಮ್ಯ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಿದ್ದರು. 12ನೇ ಶತಮಾನದಲ್ಲಿ ಸಮಾನತೆಯ, ಸಾಮಾಜಿಕ ಕ್ರಾಂತಿಯ ಹರಿಕಾರರಾಗಿ ವಚನಗಳನ್ನು ರಚಿಸಿ ಪ್ರಜಾ ಪ್ರಭುತ್ವದ ಕಲ್ಪನೆಯನ್ನು ತಿಳಿಸಿ ಸರ್ವರಿಗೂ ಸಮಾಬಾಳು ಸಮಾಪಾಲು ನಿಯಮ ಅನುಷ್ಠಾನಕ್ಕೆ ನೆರವಾದರು‘ ಎಂದು ಹೇಳಿದರು.
ಜಗದೀಶ ಪಿ ಮಾತನಾಡಿ, ‘ಹೇಮರೆಡ್ಡಿ ಮಲ್ಲಮ್ಮ ವಚನಗಳನ್ನು ಬರೆದಿಲ್ಲ ಆದರೆ ಅವರ ಜೀವನವು ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ಅವರನ್ನು ಮಹಾಸಾಧ್ವಿ ಎಂದು ಕರೆಯಲಾಗುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ತಾಯಪ್ಪ ಬಿ ಹೊಸೂರು ಮಾತನಾಡಿದರು.
ಸಾಹಿತಿ ವೀರ ಹನುಮಾನ್, ರಂಗಕರ್ಮಿ ವಿ.ಎನ್. ಅಕ್ಕಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಬೇವಿನಬಿಂಚಿ, ಸಂಘಟನಾ ಕಾರ್ಯದರ್ಶಿ ರೇಖಾ ಬಡಿಗೇರ್ ಯುವಕವಿ, ಶಿಕ್ಷಣ ತಜ್ಞ ಹನುಮಂತಪ್ಪ ಗವಾಯಿ, ನಾಗಪ್ಪ ಹೊರಪೇಟಿ, ರಾಜಶಂಕರ್ ಎನ್, ಈರಣ್ಣ ಬೆಂಗಾಲಿ, ಶಿವರಾಜ, ರಾಮಣ್ಣ ಬೋಯರ್, ಬಿ ಎಂ ನರಸಿಂಹಲು, ಸೈಯದ್ ವಲಿ, ಬಶೀರ್ ಅಹ್ಮದ್ ಹೊಸಮನಿ, ಸಾಯಿ ಸಾಗರ ಉಪಸ್ಥಿತರಿದ್ದರು.
ಸಹನಾ ಬರೂರ ಪ್ರಾರ್ಥಿಸಿದರು. ಬಿ. ವಿಜಯರಾಜೇಂದ್ರ ಸ್ವಾಗತಿಸಿದರು. ದಂಡಪ್ಪ ಬಿರಾದಾರ ನಿರೂಪಿಸಿದರು. ರಾವುತರಾವ್ ಬರೂರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.