ADVERTISEMENT

ಹೆದ್ದಾರಿ ಕಾಮಗಾರಿ | ಎರಡು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಿ: ಶಾಸಕ ಬಸನಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 14:17 IST
Last Updated 26 ಡಿಸೆಂಬರ್ 2023, 14:17 IST
ಮಸ್ಕಿಯಲ್ಲಿ ನಡೆದಿರುವ ಹೆದ್ದಾರಿ ಅಗಲೀಕರಣ ಹಾಗೂ ಚರಂಡಿ ಕಾಮಗಾರಿಯನ್ನು ಶಾಸಕ ಆರ್. ಬಸನಗೌಡ ತುರುವಿಹಾಳ ಮಂಗಳವಾರ ಪರಿಶೀಲಿಸಿದರು
ಮಸ್ಕಿಯಲ್ಲಿ ನಡೆದಿರುವ ಹೆದ್ದಾರಿ ಅಗಲೀಕರಣ ಹಾಗೂ ಚರಂಡಿ ಕಾಮಗಾರಿಯನ್ನು ಶಾಸಕ ಆರ್. ಬಸನಗೌಡ ತುರುವಿಹಾಳ ಮಂಗಳವಾರ ಪರಿಶೀಲಿಸಿದರು   

ಮಸ್ಕಿ: ಪಟ್ಟಣದ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗಿನ ಹೆದ್ದಾರಿ ಕಾಮಗಾರಿಯನ್ನು ಹಗಲು ರಾತ್ರಿ ಮಾಡಿ ಎರಡು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಶಾಸಕ ಆರ್. ಬಸನಗೌಡ ತುರುವಿಹಾಳ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದಲ್ಲಿ ಮಂಗಳವಾರ ಚರಂಡಿ ಹಾಗೂ ಅಗಲೀಕರಣ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ರಸ್ತೆಯ ಎರಡು ಬದಿಯಲ್ಲಿ ಚರಂಡಿ, ಸರ್ವೀಸ್ ರಸ್ತೆ ಹಾಗೂ ಬೀದಿ ದೀಪ ಅಳವಡಿಸಿ ಫೆಬ್ರವರಿಯಲ್ಲಿ ನಡೆಯುವ ಪಟ್ಟಣದ ಮಲ್ಲಿಕಾರ್ಜುನ ಜಾತ್ರೆ ವೇಳೆಗೆ ಆಧುನೀಕರಣಗೊಂಡ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಬೇಕು ಎಂದು ಹೇಳಿದರು. ಕಾಮಗಾರಿ ಗುಣಮಟ್ಟದ ಬಗ್ಗೆ ಅಲ್ಲಲ್ಲಿ ಆರೋಪಗಳಿದ್ದು, ತಜ್ಞರ ಸಮಿತಿ ಕಾಮಗಾರಿ ಗುಣಮಟ್ಟದ ಬಗ್ಗೆ ತೃಪ್ತಿದಾಯಕ ವರದಿ ನೀಡಿದೆ ಎಂದರು.

ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮುಂದೆ ನಿಂತು ಗುಣಮಟ್ಟದ ರಸ್ತೆ ನಿರ್ಮಿಸಬೇಕು. ಗುತ್ತಿಗೆದಾರರಿಗೆ ಯಾವುದೇ ತೊಂದರೆಯಾಗದಂತೆ ಪುರಸಭೆ ಮುಖ್ಯಾಧಿಕಾರಿಗಳು ಹೆದ್ದಾರಿಯ ಅಕ್ಕಪಕ್ಕ ಒತ್ತುವರಿ ಮಾಡಿದ್ದನ್ನು ಶೀಘ್ರ ತೆರವುಗೊಳಿಸಿಕೊಡಬೇಕು ಎಂದು ಸೂಚಿಸಿದರು.

ADVERTISEMENT

ತಹಶೀಲ್ದಾರ್ ಸುಧಾ ಅರಮನೆ, ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮನಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಸರ್ಕಲ್ ಇನ್‌ಸ್ಪೆಕ್ಟರ್ ಬಾಲಚಂದ್ರಿ ಡಿ.ಲಕ್ಕಂ, ಪಿಎಸ್ಐ ತಾರಾಭಾಯಿ, ಯೋಜನೆ ಎಂಜನಿಯರ್ ಡಿ.ಎಂ. ಮೇಲಿನಮನಿ, ಅಮ್ಮಾಪೂರ ಕಂಪನಿಯ ಎಂಜನೀಯರ್ ಜ್ಯೋಷಿ, ಸಂಗಮೇಶ, ರೋಹಿತ್, ನೀರಾವರಿ ನಿಗದಮ ಮಲ್ಲಯ್ಯ ಕಟ್ಟಿಮನಿ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು. ಶಾಸಕರ ಸರ್ಕಾರಿ ಕಚೇರಿಯಿಂದ ಒಂದು ಕಿಲೊ ಮೀಟರ್‌ವರೆಗೆ ನಡೆದುಕೊಂಡೇ ಕಾಮಗಾರಿ ಪರಿಶೀಲಿಸಿದ ಶಾಸಕ ಆರ್. ಬಸನಗೌಡ ಅಲ್ಲಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.