ಸಿಂಧನೂರು: ‘ಲೇಖಕಿ ಹಾಗೂ ವಿಮರ್ಶಕಿ ಅರುಂಧತಿ ರಾಯ್ ವಿರುದ್ಧ ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಂಡಿರುವುದು ಖಂಡನೀಯ’ ಎಂದು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ರಾಜ್ಯ ಸಮಿತಿ ಸಂಚಾಲಕ ಎಂ.ಗಂಗಾಧರ್ ಬುದ್ದಿನ್ನಿ ದೂರಿದ್ದಾರೆ.
ಶನಿವಾರ ಹೇಳಿಕೆ ನೀಡಿರುವ ಅವರು, ‘ಪ್ರತಿಭಟನೆಗಳ ಧ್ವನಿಗಳನ್ನು ನಿಗ್ರಹಿಸುವ ಮತ್ತೊಂದು ಪ್ರಯತ್ನದಲ್ಲಿ ಫ್ಯಾಸಿಸ್ಟ್ ಮೋದಿ ಸರ್ಕಾರವು ಅರುಂಧತಿ ರಾಯ್ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುತ್ತಿದೆ. ಫ್ಯಾಸಿಸ್ಟ್ ಸರ್ಕಾರದ ಕಟು ಟೀಕಾಕಾರರನ್ನು ವಿರುದ್ಧ ಹಿಮ್ಮೆಟ್ಟಿಸಿ, ಸದೆಬಡಿಯಲು ನಿರ್ಧರಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು 2010ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅರುಂಧತಿ ರಾಯ್ ವಿರುದ್ಧ ಕಠಿಣ ಯುಎಪಿಎ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ. ಫ್ಯಾಸಿಸ್ಟ್ ಸಂಘ ಪರಿವಾರ ಮತ್ತು ಬಹುಸಂಖ್ಯಾತ ಹಿಂದುತ್ವ ರಾಜಕಾರಣದ ವಿರುದ್ಧ ಧ್ವನಿಯೆತ್ತುವ ಎಲ್ಲ ಪ್ರಕಾರದ ಜನ ಚಳುವಳಿಗಾರರು ಈ ಕೃತ್ಯವನ್ನು ಖಂಡಿಸುತ್ತೇವೆ. ಪ್ರಜಾಸತ್ತಾತ್ಮಕ ಜನರು, ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಸಂಘಟನೆಗಳು ಆರ್ಎಸ್ಎಸ್ ಮಾರ್ಗದರ್ಶನದ ಫ್ಯಾಸಿಸ್ಟ್ ಮೋದಿ ಸರ್ಕಾರದ ಈ ಹೇಯ ಪ್ರಯತ್ನವನ್ನು ವಿರೋಧಿಸಬೇಕು’ ಎಂದು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.