ರಾಯಚೂರು: ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಿರುವುದು ಜನ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಜಿಲ್ಲಾ ಘಟಕದ ವತಿಯಿಂದ ತೀವ್ರವಾಗಿ ಖಂಡಿಸಿದ್ದಾರೆ.
ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ವಿಧಿಸಿದ ಕಾರಣ ಪೆಟ್ರೋಲ್ ಬೆಲೆ ₹3 ಹಾಗೂ ಡೀಸೆಲ್ ಬೆಲೆ ₹3.50 ಹೆಚ್ಚಳವಾಗಿದೆ. ₹85.93 ಇದ್ದ ಡೀಸೆಲ್ ಬೆಲೆ ₹89.20 ಪೈಸೆಗೆ ಏರಿದರೆ, ₹100 ಇದ್ದ ಪೆಟ್ರೋಲ್ ದರ ₹103ಕ್ಕೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
ಇಂದನ ದರಗಳ ಏರಿಕೆ ಜನ ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಮೇಲೆ ಪರಿಣಾಮ ಬೀರುತ್ತವೆ. ಕಳೆದ ವರ್ಷ ಬರಗಾಲದಿಂದ ಗ್ರಾಮೀಣ ಪ್ರದೇಶದ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳಲು ತೈಲ ಬೆಲೆ ಏರಿಸಿರುವುದು ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ.
ಸೆಸ್ ಹೆಚ್ಚು ಮಾಡಿರುವುದನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಡಿವೈಎಫ್ಐ ಜಿಲ್ಲಾ ಘಟಕದ ಸಂಚಾಲಕ ರಾಜು ನಾಯಕ, ಸಮಿತಿ ಸದಸ್ಯರಾದ ರಿಯಾಜ್ ಆರ್ತಿ, ಅಲ್ಲಾಭಕ್ಷ ಸಾಶಿಹಾಳ, ಚೆನ್ನಬಸವ ವಂದಲಿ, ಶರಣಬಸವ ಆನೆಹೊಸೂರು ಕಾಶಿಪತಿ ತವಗ, ಸದ್ದಾಂ ಹುಸೇನ್ ನಗನೂರು, ಪಯಾಜ್ ಬಂಡಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.