ಮಾನ್ವಿ: ‘ಪಟ್ಟಣದಲ್ಲಿ ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಕುಮ್ಮಕ್ಕಿನಿಂದ ಕಾನೂನು ಬಾಹಿರವಾಗಿ ಲೇಔಟ್ಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಪಿ.ಅನಿಲ ಕುಮಾರ ಆರೋಪಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುರಸಭೆ ವ್ಯಾಪ್ತಿಯಲ್ಲಿ ಎಸ್.ಆರ್ ಡೆವಲಪರ್ಸ್ ಸಂಸ್ಥೆಯ ಸೂರಿಬಾಬು, ಸಂತೋಷ್ ಸೇಠ್ ಮತ್ತಿತರರಿಂದ ನಿಯಮ ಉಲ್ಲಂಘಿಸಿ ಒಟ್ಟು 14 ಲೇಔಟ್ಗಳು ತಲೆ ಎತ್ತಿವೆ. ಈ ಪೈಕಿ 9 ಲೇಔಟ್ಗಳಿಗೆ ಪುರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ನಿರಪೇಕ್ಷಣಾ ಪತ್ರಗಳನ್ನೂ ನೀಡಿದ್ದಾರೆ. 14 ಲೇಔಟ್ಗಳಲ್ಲಿ ನಿಯಮಾನುಸಾರ ಸಮರ್ಪಕವಾದ ಕುಡಿಯುವ ನೀರು, ಒಳಚರಂಡಿ, ಮಳೆ ನೀರು ಕೊಯ್ಲು, ಸುಸಜ್ಜಿತ ರಸ್ತೆಯ ವ್ಯವಸ್ಥೆ ಇಲ್ಲ. ವಿದ್ಯುತ್ ಪರಿವರ್ತಕ ಅಳವಡಿಸಿಲ್ಲ’ ಎಂದು ದೂರಿದ ಅವರು, ‘ಅಕ್ರಮವಾಗಿ ನಿರ್ಮಿಸಿರುವ ಲೇಔಟ್ಗಳಲ್ಲಿನ ನಿವೇಶನಗಳನ್ನು ₹15 ಲಕ್ಷದಿಂದ ₹20 ಲಕ್ಷಗಳ ವರೆಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.
‘ಈ ಬಗ್ಗೆ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದ್ದು ಸರಿಯಾಗಿ ಪರಿಶೀಲನೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಲೇಔಟ್ಗಳ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಅವರು ಒತ್ತಾಯಿಸಿದರು.
ಮುಖಂಡರಾದ ನಾಗಪ್ಪ ಭೋಗಾವತಿ ಹಾಗೂ ಚಿನ್ನಪ್ಪ ಪಟ್ಟದಕಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.