ADVERTISEMENT

‘ಸಮಾಜದ ಅಂಕು-ಡೊಂಕು ತಿದ್ದುವ ಕತೆ ರಚಿಸಿ’

​ಪ್ರಜಾವಾಣಿ ವಾರ್ತೆ
Published 1 ಮೇ 2022, 12:19 IST
Last Updated 1 ಮೇ 2022, 12:19 IST
ಸಿಂಧನೂರಿನ ಸರ್ಕಾರಿ ಮಹಾವಿದ್ಯಾಲಯ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಕತೆಗಾರ ಅಮರೇಶ ಗಿಣಿವಾರ ಮಾತನಾಡಿದರು
ಸಿಂಧನೂರಿನ ಸರ್ಕಾರಿ ಮಹಾವಿದ್ಯಾಲಯ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಕತೆಗಾರ ಅಮರೇಶ ಗಿಣಿವಾರ ಮಾತನಾಡಿದರು   

ಸಿಂಧನೂರು: ಪ್ರಭುತ್ವದ ವೈಫಲ್ಯತೆ ಮತ್ತು ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು ತಿದ್ದುವ ಕತೆಗಳನ್ನು ರಚಿಸುವುದು ಪ್ರಸ್ತುತ ಅಗತ್ಯವಾಗಿದೆ ಎಂದು ಕತೆಗಾರ ಅಮರೇಶ ಗಿಣಿವಾರ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಮಹಾವಿದ್ಯಾಲಯ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ವಿಭಾಗದಿಂದ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಹಾಗೂ ಕತೆಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನವ್ಯ ಮತ್ತು ಬಂಡಾಯ ಕತೆಗಳನ್ನು ವಸ್ತುವಿನ ದೃಷ್ಟಿಯಿಂದ ನೋಡಿದಾಗ ಕಾಮದ ಅದಮ್ಯ ಗುಣ, ಮನುಷ್ಯ ಪ್ರವೃತ್ತಿಗಳು, ಮನಸ್ಸಿನ ತೊಳಲಾಡಿಸುವ, ವಿಕ್ಷಿಪ್ತತೆ ದ್ವಂದ್ವಗಳು ಒಂದು ಕಡೆಯಾದರೆ, ಹಸಿವು, ದಾರಿದ್ರ್ಯ, ಸಾಮಾಜಿಕ ಅಪಮಾನ, ದಬ್ಬಾಳಿಕೆ, ಪ್ರತಿಭಟನೆಗಳು ಇನ್ನೊಂದೆಡೆ ಮುಖ್ಯವಾಗಿವೆ. ಇವು ಲೇಖಕರ ವರ್ಗ ನೆಲೆಗಳಿಗೆ ತಗುಲಿಕೊಂಡಿವೆ’ ಎಂದರು.

ADVERTISEMENT

‘ತಮ್ಮ ಬದುಕಿನಲ್ಲಿ ಹಾಗೂ ಸುತ್ತಮುತ್ತಲಿನಲ್ಲಿ ನಡೆದ ನೈಜ ಘಟನೆಗಳನ್ನೇ ಗ್ರಾಮ್ಯ ಭಾಷೆಯ ಬಳಕೆ ಶೈಲಿಯನ್ನು ಉಪಯೋಗಿಸಿಕೊಂಡು ಕತೆ ರೂಪದಲ್ಲಿ ಹೊಸ ಆಯಾಮ ನೀಡಲಾಗಿದೆ. ಅಧ್ಯಯನವಿಲ್ಲದೆ ಕತೆ, ಕವನ, ಸಾಹಿತ್ಯ ರಚಿಸುವುದು ಅಷ್ಟು ಸುಲಭವಲ್ಲ. ಓದಿನ ಹಸಿವು ಇರುವುದರಿಂದ ಹೊಸತನ ಸಾಹಿತ್ಯ ರಚನೆ ಸಾಧ್ಯವಿದೆ’ ಎಂದು ಹೇಳಿದರು.

ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಕೆ.ಖಾದರ್‍ಬಾಷ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಸೈಯ್ಯದ್ ಮುಜೀಬ್, ಉಪನ್ಯಾಸಕರಾದ ಬಸವರಾಜ ಪಿ.ನಾಯಕ, ರಾಮಣ್ಣ ಹಿರೇಬೇರಿಗಿ, ಎರಿಯಪ್ಪ ಬೆಳಗುರ್ಕಿ, ಮಲ್ಲಯ್ಯ ಹಿರೇಮಠ, ಡಾ.ಬಸವರಾಜ ಬಳಿಗಾರ, ಡಾ.ಹುಲಿಗೆಪ್ಪ ಧುಮತಿ, ಡಾ.ಪರಶುರಾಮ ಕಟ್ಟಿಮನಿ ಇದ್ದರು. ಶಂಕರ ಗುರಿಕಾರ ಹಾಗೂ ಸಂಗಡಿಗರು ಬಂಡಾಯದ ಗೀತೆ ಹಾಡಿದರು. ಜ್ಯೋತಿ ಸ್ವಾಗತಿಸಿದರು. ನಾಗರತ್ನ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.