ದೇವದುರ್ಗ: ಬೆಳೆ ನಷ್ಟವಾದ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾದ ಬೆಳೆ ವಿಮೆ ಅನ್ಯರ ಪಾಲಾಗಿದ್ದು, ₹2 ಕೋಟಿ ವಿಮೆಯನ್ನು ರೈತರಿಗೆ ವಂಚಿಸಲಾಗಿದೆ. ಈ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪಡೆಯಲಾಗಿದೆ.
ತಾಲ್ಲೂಕಿನ 2021-22ನೇ ಸಾಲಿನ ಪ್ರಧಾನಮಂತ್ರಿ ಬಿಮಾ ಫಸಲ್ ಯೋಜನೆಯಲ್ಲಿ ತಾಲ್ಲೂಕಿನ ಗಾಣದಾಳ ಮತ್ತು ಜಾಲಹಳ್ಳಿ ಗ್ರಾ.ಪಂ ವ್ಯಾಪ್ತಿಗಳ ರೈತರಿಗೆ ಮಾತ್ರ ವಿಮೆ ಪಾವತಿಯಾಗಿರುವದು ಆಶ್ಚರ್ಯ ಮೂಡಿಸಿದೆ. ಜತೆಗೆ ವಿಮೆ ಹಣ ರೈತರಿಗೆ ಜಮ ಬದಲು ಭೂರಹಿತರ ಅಕೌಂಟ್ಗೆ ಜಮೆ ಮಾಡಿರುವುದು ಅನುಮಾನ ಮೂಡಿಸಿದೆ.
ವಿಮಾ ಕಂಪನಿಯ ಜತೆ ಒಡನಾಟ ಇಟ್ಟುಕೊಂಡು, ವ್ಯವಸ್ಥಿತವಾಗಿ ಲೂಟಿ ಮಾಡಲಾಗಿದ್ದು, ಇದರಲ್ಲಿ ಹತ್ತಾರು ಅಧಿಕಾರಿಗಳು ಹಾಗೂ ಜನರ ಕೈಚಳಕ ಇದೆ ಎಂದು ರೈತ ಸಂಘ ಆರೋಪ ಮಾಡಿದೆ.
ಜಾಲಹಳ್ಳಿ ಪಟ್ಟಣದಲ್ಲಿ ಪ್ರತಿಷ್ಠಿತರ ಅಕೌಂಟ್ಗಳಿಗೆ ಹಾಗೂ ಭೂಮಿಯೇ ಇಲ್ಲದವರಿಗೂ ಹಣ ಜಮೆಯಾಗಿದ್ದು, ಸೂಕ್ತ ತನಿಖೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಜಾಲಹಳ್ಳಿಯ ವೀರಭದ್ರಯ್ಯ ಸ್ವಾಮಿ ಎಂಬುವರಿಗೆ ₹4,57,819, ಬಸವರಾಜ ಎಂಬುವವರಿಗೆ ₹ 6,93,391ರೂ ಮತ್ತು ಅವರ ಕುಟುಂಬ ಸದಸ್ಯರಿಗೂ ಬೆಳೆವಿಮೆ ಹಣ ಜಮೆಯಾಗಿದೆ. ನೀಲಮ್ಮ ಎಂಬುವವರಿಗೆ ₹2,71,851, ರಾಚಯ್ಯ ₹ 1,90,426 ಹೀಗೆ ದಯಾನಂದ, ಬಸವರಾಜ ಸೇರಿದಂತೆ ಅನೇಕರಿಗೆ ಬೆಳೆವಿಮೆ ಹಣ ಜಮೆಯಾಗಿದೆ. ಇಷ್ಟು ಹಣ ನಾಲ್ಕೈದು ವ್ಯಕ್ತಿಗಳಿಗೆ ಮಾತ್ರ ಜಮೆಯಾಗಿರುವುದು ಹೇಗೆ? ಇದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಫಸಲ್ ಬಿಮಾ ಯೋಜನೆ ಬೆಳೆ ವಿಮೆ ದುರಪಯೋಗವಾಗಿರುವದು ಗಮನಕ್ಕೆ ಬಂದಿದೆ. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುವೆ.
ಶ್ರೀನಿವಾಸ ನಾಯಕ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ದೇವದುರ್ಗ
ಜಿಲ್ಲೆಯಾದ್ಯಂತ ಫಸಲ್ ಬಿಮಾ ಯೋಜನೆಯಲ್ಲಿ ₹10 ಕೋಟಿ ಹಣ ವಂಚನೆಯಾಗಿದೆ. ಈಗಾಗಲೇ ಇಲಾಖೆ ಕಾರ್ಯದರ್ಶಿಯವರ ಗಮನಕ್ಕೆ ತರಲಾಗಿದೆ. ಸೂಕ್ತ ತನಿಖೆಯ ಭರವಸೆ ನೀಡಿದ್ದಾರೆ.
ಚಾಮರಸ ಪಾಟೀಲ್, ರಾಜ್ಯಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ.
ವಿಮೆ ಕಂಪನಿಯೊಂದಿಗೆ ಕೃಷಿ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಭೂಹೊಂದಿದ ರೈತರಿಗೆ ವಂಚಿಸಿದ್ದಾರೆ. ಕಳೆದ 4 ವರ್ಷದ ವಿಮೆಯ ಸಮಗ್ರ ತನಿಖೆಗೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಿ
ರಾಜ ವಾಸುದೇವ ನಾಯಕ, ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.